ಹೀಗೆ 'ಏನೋ ಒಂದು' ಹೇಳಬೇಕೆನಿಸುವ ಮಾತುಗಳು,ಹಲವು ಸಣ್ಣ ಪುಟ್ಟ ಕಥೆಗಳು,ಕೆಲವು ಉದ್ದದ ಕಥೆಗಳು,ಅರಬ್ಬಿಯ ಭೋರ್ಗರೆತದೊಳಗಿರುವ ಮೌನಕ್ಕೆ ಕಿವಿಯಾದರೆ ನೀವು,ನನ್ನದೇ ಅನುಭವದ ಕಥೆಗಳನ್ನು ಕೂಡ ಹೇಳುವ ಫಲ್ಗುಣಿ ತೀರದ ಹುಡುಗ 'ಪಚ್ಚು' ನಾನು..
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತ...
ನವಿಲು ಕೊಂದ ಹುಡುಗ l ಸಚಿನ್ ತೀರ್ಥಹಳ್ಳಿ ಒಂದೊಳ್ಳೆಯ ಕತೆ ಓದಿ ಮುಗಿಸಿದರೆ ರುಚಿಯ ಲಡ್ಡು ತಿಂದಷ್ಟೇ ಖುಷಿ ನನಗೆ. ಕತೆಗಳ ಮಾಯಲೋಕಗಳು ಹುಟ್ಟಿಸುವ ಬೆರಗುಗಳು ನನ್ನಲ್ಲಿ ಎಲ್ಲಾ ಕಾಲಕ್ಕೂ ಬಹಳ ಜೋಪಾನ. ಬೆರಗು ಬದುಕಿಗೆ ಬೇಕು. ಬೆರಗಿನಲ್ಲಿ ಒಂಥರಾ ಪುಳಕವಿದೆ. ಅಂತಹದ್ದರಲ್ಲಿ ಅವೆಲ್ಲವೂ ಇರುವ, ಬರೀ ಒಂದಲ್ಲ ಹತ್ತು ಚಂದ ಚಂದದ ಉಲ್ಲಾಸದ್ದೇ ಕತೆಗಳಿಂದ ಕೂಡಿರುವ ಈ ಒಂದು ಸಂಕಲನವನ್ನು ಮನೆಯಲ್ಲಿಟ್ಟುಕೊಂಡು, ಇನ್ನೂ ಓದದೇ ಉಳಿದುದಕ್ಕೆ ಸ್ವತಃ ನನಗೆಯೇ ನನ್ನ ಬಗ್ಗೆ ಸಿಕ್ಕಾಪಟ್ಟೆ ಬೇಜಾರಿದೆ. ಲಡ್ಡುಗಳ ತಟ್ಟೆಯೇ ಎದುರಿದ್ದರೂ ಸವಿಯದೇ ಸುಮ್ಮನುಳಿಯುವ ಉದಾಸೀನಕ್ಕೆ ಜೈ ಹೇಳಲೇಬಾರದು. ಪ್ರದೀಪ್ ಬತ್ತೇರಿ ಕೈಚಳಕದ ಈ ಪುಸ್ತಕದ ಆಕರ್ಷಕ ಮುಖಪುಟದಲ್ಲಿ ನವಿಲು ತನ್ನದೊಂದು ಸಾವಿರ ಕಣ್ಣುಗಳ ಗುರಿಯನ್ನು ಬಿಚ್ಚದೆ, ತಲೆಗೆ ಹನ್ನೆರಡು ಪುಕ್ಕಗಳ ಬಿಡಿ ಬಿಡಿ ಜುಟ್ಟು ಹಾಕಿಕೊಂಡು, ಉದ್ದದ ಚುಂಚು ಕೆಳಗೇ ಮಾಡಿಕೊಂಡು ಏನನ್ನೋ ಹೇಳುವುದಕ್ಕಾಗಿ ನಿಂತಂತಿದೆ. ಅದರ ಒಂಟಿ ಕಣ್ಣಿನಲ್ಲಿ ನೆತ್ತರು ಕದಡಿದ ಸಂಜೆಯದ್ದೇ ಬಣ್ಣ. ಪುಸ್ತಕದ ಶೀರ್ಷಿಕೆಯಲ್ಲೂ ಒಂದು ಕೆಂಪು ಬಣ್ಣದ್ದೇ ಬೊಟ್ಟು. ನವಿಲಿನ ಕಂಠದಲ್ಲಿ ಕೋವಿ ಹಿಡಿದ ಶಿಖಾರಿಯವನ ಅಸ್ಪಷ್ಟ ಗೆಲುವಿನ ಚಿತ್ರ. ಶೀರ್ಷಿಕೆಯಲ್ಲಿ ವಿಭಕ್ತಿ ಪ್ರತ್ಯಯ ಮಾಯವಾಗಿ ಹುಡುಗ ನವಿಲನ್ನು ಕೊಂದದ್ದೋ ಅಥವಾ ನವಿಲೇ ಹುಡುಗನನ್ನು ಕೊಂದದ್ದೋ ಎಂಬ ವಿಶೇಷ ಗಲಿಬಿಲಿ ನನಗೆ. ಏನೇನೋ ಕುತೂಹಲಗಳಿಂದ ಕತೆ ...
" ಬಿಡುಗಡೆ " ಕೆಲವರು ಗೊಂಚಲು ಗೊಂಚಲು ಪುಗ್ಗೆಗಳನ್ನು ಮಾರುತ್ತಾರೆ. ಇನ್ನು ಕೆಲವರು ಡಬ್ಬದಲ್ಲಿ ಸಿಹಿತಿಂಡಿಗಳನ್ನು ಮಾರುತ್ತಾರೆ; ಮತ್ತೆ ಕೆಲವರದ್ದು ಬುಟ್ಟಿಯ ತುಂಬಾ ಹೂ ಹಣ್ಣು, ನೆಲಗಡಲೆಯ ವ್ಯಾಪಾರ. ಆದರೆ ನಾನು ಹಕ್ಕಿ ಮಾರುತ್ತೇನೆ. ಬಣ್ಣದ ಜೀವಂತ ಹಕ್ಕಿಗಳನ್ನು ನನ್ನ ಪಂಜರದಲ್ಲಿಟ್ಟುಕೊಂಡು, ಹೆಗಲಿಗೊಂದು ಹಳೆಯ ಜೋಳಿಗೆ ಏರಿಸಿಕೊಂಡು ನಾನು ರಸ್ತೆಯ ಬದಿಯಲ್ಲಿ ನನ್ನಿಷ್ಟದ ಹಾಡುಗಳನ್ನು ಮೆಲುವಾಗಿ ಗುನುಗುತ್ತಾ ಪ್ರತೀ ದಿನವೂ ಉದ್ದಕ್ಕೆ ನಡೆಯುತ್ತೇನೆ. ದೇವರಿಗೆ ದಿನಾಲೂ ದೀಪ ಹೊತ್ತಿಸದಿದ್ದರೂ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಹಳಷ್ಟು ಹೊತ್ತು ಕೆಂಪು ದೀಪವೊಂದೇ ಪ್ರಜ್ವಲವಾಗಿ ಸದಾ ಉರಿಯುತ್ತಿರಲಿ ಎನ್ನುವುದೇ ನನ್ನದೊಂದು ಅನುದಿನದ ಪ್ರಾರ್ಥನೆ. ಅಂದ ಹಾಗೆ ನನ್ನಲ್ಲಿ ಮಾರಲು ಮುದ್ದಾದ ಮೂರು ಹಕ್ಕಿಗಳಿವೆ. ಹೌದು, ಕೇವಲ ಮೂರು ಮಾತ್ರ. ಪ್ರತೀ ಬಾರಿಯೂ ಮಾರಲು ನನ್ನಲ್ಲಿರುವುದು ಈ ಮೂರು ಹಕ್ಕಿಗಳೇ! ರಸ್ತೆ ಪಕ್ಕ ನಡೆಯುವಾಗ ಯಾರಾದರೊಬ್ಬರ ಕಣ್ಣಿಗೆ ನಾನು ಅವಶ್ಯವಾಗಿ ಬೀಳುತ್ತೇನೆ. ನನಗಿಂತಲೂ ಹೆಚ್ಚು ನನ್ನ ಪಂಜರದ ಹಕ್ಕಿಗಳ ಕಲರವವೇ ಈ ಹೆತ್ತವರ ಸಣ್ಣಪುಟ್ಟ ಮಕ್ಕಳ ಗಮನವನ್ನು ಇನ್ನಿಲ್ಲದೆ ಸೆಳೆದು ಬಿಡುತ್ತದೆ. ಏಕೆಂದರೆ ನನ್ನ ಈ ಮೂರೂ...
Comments
Post a Comment