Posts

Showing posts from February, 2022

Meppadiyan

Image
 #Meppadiyan | [       ]  ಇದರ ಕಥೆ ಬಹಳ ಸರಳವಾದದ್ದು,ಇಂತಹ ಕಥೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ದಿನ ನಿತ್ಯವೂ ಸದ್ದಿಲ್ಲದೇ ನಡೆದು ಹಾಗೇ ತೆರೆಮರೆಗೆ ಸರಿಯುವಂತಹದ್ದು.ಇಷ್ಟೆಲ್ಲಾ ಸರಳ ಸಾಮಾನ್ಯ ಕಥೆ ಆಗಿದ್ದರೂ ಕೂಡ ಈ ಮೂವಿ ಬಾರೀ ಚಂದ ಉಂಟು ಆಯ್ತಾ.  ಈ ಕಥೆಯ ನಾಯಕ ಜಯಕೃಷ್ಣನ್.ಅವನು ಇಲ್ಲಿ ನೀವೇ ಆಗಿರಬಹುದು,ಇಲ್ಲವೇ ಪಕ್ಕದ ಮನೆಯ ನಿಮ್ಮ ಸ್ನೇಹಿತನೂ   ಆಗಿರಬಹುದು,ಇಲ್ಲದಿದ್ದರೆ ನಿಮ್ಮ ಊರಿನಲ್ಲಿಯೇ ಇರುವ ಯಾರೋ ಒಬ್ಬ ಅವಶ್ಯವಾಗಿ ಈ ಕಥೆಯ ಜಯಕೃಷ್ಣನ್ ನಂತೆಯೇ ಇರಬಹುದು. ಬರೀ ಕಾಸಿದ ಹಾಲು ಮಾತ್ರ ಕುಡಿಯುವ ಜಯಕೃಷ್ಣನ್ ನ  ಮನಸ್ಸು ಕೂಡ ಇಲ್ಲಿ ಶುದ್ಧ ಹಾಲಿನಷ್ಟೇ ಬಹಳಷ್ಟು ಪರಿಶುದ್ಧವಾದದ್ದು ಹಾಗು ಅಷ್ಟೇ ಶುಭ್ರವಾದದ್ದು.ಮೂವಿ ಉದ್ದಕ್ಕೂ ಅವನು ಸೋಲದಿರಲಿ ಎಂದೇ ನಿಮ್ಮ ಮನಸ್ಸಿಗೂ ಅನ್ನಿಸಿಬಿಟ್ಟರೆ ಆ ಕ್ಷಣಕ್ಕೆನೇ ಅವನು ತುಂಬಾ ನಿಮ್ಮವನು.ಕೆಲವೊಮ್ಮೆ ಅವನು ಸತ್ಯ ಹರಿಶ್ಚಂದ್ರನ ಅಸಲಿ ತುಂಡಿನಂತೆಯೇ ಅಲ್ಲಲ್ಲಿ ಗೋಚರಿಸಿ ಮನಸ್ಸನ್ನು ಸಿಕ್ಕಾಪಟ್ಟೆ ಹಿಂಡಿ ಬಿಡುತ್ತಾನೆ.ಒಟ್ಟಿನಲ್ಲಿ ಈ ಸಮಾಜದಲ್ಲಿನ ಮುಗ್ಧರು,ಜನ ಸಾಮಾನ್ಯರು ಪಡಬಹುದಾದ ಕಷ್ಟಗಳೇ ಅವನದ್ದೊಂದು ಕಷ್ಟ ಇಲ್ಲಿ.ಹಾಗಂತ ಅವನ ಕಷ್ಟ,ಅವನು ಒಳ್ಳೆಯವನು ಅನ್ನುವುದಷ್ಟೇ ಈ ಮೂವಿಯ ಒಟ್ಟು ಕಥೆಯಲ್ಲ,ಅದು ಕಥೆಯ ಆಶಯವೂ ಅಲ್ಲ.ಮಾನವನ ಕೆಟ್ಟ ವಾಂಛೆಗಳು ಹಾಗೂ ಪರಿಸ್ಥಿತಿಯ ಲಾಭ ಪಡೆಯುವ ಅವನದ್ದೊಂದು ಮನುಷ್ಯ ಸಹಜ ಹವಣಿಕೆ ಹಾಗೂ ಎಲ್ಲದರ ಸ್ಪಷ್ಟ ಅರಿವಿದ್ದರೂ ಒಬ್ಬ ಮನ

ನಕ್ಷತ್ರದ ನಗು ನಕ್ಕವಳು..

Image
                                   "  ಪುಷ್ಯರಾಗ"                            (ನಕ್ಷತ್ರದ ನಗು ನಕ್ಕವಳು.. ) ಆ ರಾತ್ರಿಯೇ ಬೇರೆಯಾಗಿತ್ತು,ಆ ಮಾತುಗಳೂ ಬೇರೆಯದ್ದೇ  ಆಗಿತ್ತು.ಕೆಲವೊಮ್ಮೆ ಅನಿಸುತ್ತದೆ ಜೀವನದ ಪ್ರತೀ ರಾತ್ರಿಯೂ ಆ ರಾತ್ರಿಯಂತೆಯೇ ಇರಬೇಕಿತ್ತು ಹಾಗೂ ಆಡುವ ಮಾತುಗಳು ಸಹ ಆ ರಾತ್ರಿಯದ್ದೇ ಆಗಿರಬೇಕಿತ್ತು ಎಂದು.  ಹೌದು,ಅದೊಂದು ರಾತ್ರಿಯೇ ಅವಳು ನನಗೆ ಮೊದಲ ಬಾರಿಗೆ ಸಿಕ್ಕಿದ್ದು;ಮತ್ತು ನಾನವಳಿಗೆ.  ಆ ರಾತ್ರಿ ಅವಳು ಆ ಒಂದು ಬಸ್ ಸ್ಟಾಪ್ ನಲ್ಲಿ ಒಬ್ಬಳೇ ನಿಂತಿದ್ದಳು.ಜೋರಾಗಿ ಮಳೆ ಬೇರೆ ಸುರಿಯುತ್ತಿತ್ತು.ಹಾಗಾಗಿ ಓಡಿಸುತ್ತಿದ್ದ  ಬೈಕ್ ಅನ್ನು ನಿಲ್ಲಿಸಿ ನಾನು ಕೂಡ ಅದೇ ಬಸ್ ಸ್ಟಾಪ್ ನ ಅಡಿಗೆ ನಡೆದಿದ್ದೆ.ಬರುತ್ತಿದ್ದ ಜೋರು ಮಳೆಗೆ ಮೊದಲು ನಾನು ಹಿಡಿ ಶಾಪ ಹಾಕಿದ್ದೆನಾದರೂ ಅವತ್ತು ಮಳೆ ಬಂದಿದ್ದು ಒಳ್ಳೆಯದೇ ಆಯಿತೆಂದು ಆಮೇಲೆ ನನಗೆ ಬಹಳ ಸಲ ಅನಿಸಿತ್ತು,ಏಕೆಂದರೆ ಅವತ್ತು ಅವಳು ಸಿಕ್ಕಿದ್ದಳು.  ಆ ಬಸ್ ಸ್ಟಾಪ್ ನ ಒಂದು ತುದಿಯಲ್ಲಿ ಅವಳು ನಿಂತಿದ್ದಳು ಮತ್ತೊಂದು ತುದಿಯಲ್ಲಿ ನಾನು ನಿಂತಿದ್ದೆ.ಮೌನ ನಮ್ಮಿಬ್ಬರ ಹೆಗಲ ಮೇಲೆ ಕೈ ಹಾಕಿ ಅದರಷ್ಟಕ್ಕೆ ನಿಂತಿತ್ತು.  ಅವಳನ್ನೇ ನೋಡಿದೆ.ಅವಳು ಮಳೆಗೆ ನೆನೆದ ಗುಬ್ಬಿಯಂತೆ  ಕಂಡಳು.ಮಾತಾಡಿಸುವ ಧೈರ್ಯ ನನಗಿರಲಿಲ್ಲ.ಅಗತ್ಯವೂ ಇರಲಿಲ್ಲ.ಹಾಗಾಗಿ ಮೌನವೊಂದೇ ಮತ್ತಷ್ಟು ವಿಜೃಂಭಿಸಿತ್ತು.  ಆ ಮಳೆಗೆ,ಆ ಚಳಿಗೆ ಬಿಸಿ ಬಿಸಿಯಾದ ಟೀ ಒಂದು ಬೇಕಿತ್ತು

ಕಣ್ಣ ಹೊಳಪಿನ ನನ್ನ ದೊರೆ

Image
                                    "  ಪುಷ್ಯರಾಗ "                        (ಕಣ್ಣ ಹೊಳಪಿನ ನನ್ನ ದೊರೆ..) ನಾನು ಯಾವತ್ತೂ ಅವನಿಗೆ ನನ್ನೊಳಗಿನ ಏನನ್ನೂ ಮುಕ್ತವಾಗಿ ಹೇಳಿಕೊಂಡಿರಲಿಲ್ಲ.ಅವನಲ್ಲೂ ತುಂಬಾ ಒತ್ತಾಯ ಮಾಡಿ ನನಗೆ ಬೇಕಾಗಿದ್ದನ್ನು ಕೇಳಿರಲೂ ಇಲ್ಲ.ಹಾಗಾಗಿ ಅವನು ಸನಿಹವೇ ಇದ್ದರೂ ಅವನೊಳಗಿನ ಅವನು ನನಗೆ ಬಹಳಷ್ಟು ಅಸ್ಪಷ್ಟವಾಗಿಯೇ ಇದ್ದ. ಮನಸ್ಸಿನ ಮಾತುಗಳನ್ನು ಹೇಳಿ ಬಿಡಬೇಕು,ಬಚ್ಚಿಟ್ಟುಕೊಂಡಷ್ಟು ಅದು ಹೃದಯಕ್ಕೆ ಕಷ್ಟ,ಮುಂದಕ್ಕೆ ಅದೇ ನಮ್ಮನ್ನೇ ಇಂಚಿಂಚು ಸುಡುತ್ತದೆ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಎಲ್ಲವನ್ನೂ ಹೇಳಿ ಬಿಟ್ಟರೆ ನಾನವನ್ನೇ ಕಳೆದುಕೊಳುತ್ತೇನೆನೋ ಎಂದೇ ನನಗೆ ಪ್ರತೀ ಬಾರಿ ಅನಿಸುತ್ತಿತ್ತು.ಹಾಗಾಗಿ ನಾನು ಏನನ್ನೂ ಹೇಳಲಿಲ್ಲ.ಅವನೂ ಹಾಗೆಯೇ,ಅವನಾಗಿಯೇ ಏನನ್ನೂ ಹೇಳುವವ ಅವನಂತು ಮೊದಲೇ ಆಗಿರಲಿಲ್ಲ.ಹಾಗಾಗಿ ನಮ್ಮ ನಡುವೆ ಏನೋ ಒಂದು ಇದ್ದದ್ದು ಹಾಗೆಯೇ ಬಹಳಷ್ಟು ತೆರೆಮರೆಗೆ ಸರಿದಿತ್ತು. ಶಾಲಾ ದಿನಗಳಲ್ಲಿ ನಾನು ಬಹಳ ಸೊಗಸಾಗಿ ಹಾಡುತ್ತಿದ್ದೆ.ಎಲ್ಲರೂ ನನ್ನ ಹಾಡನ್ನು ಕೇಳಿ ಮೆಚ್ಚುತ್ತಿದ್ದರು.ಜೋರಾಗಿಯೇ ಚಪ್ಪಾಳೆ ಕೂಡ ಹೊಡೆಯುತ್ತಿದ್ದರು.ಆದರೆ ಅವನು ಮಾತ್ರ ಏನೂ ಹೇಳುತ್ತಿರಲಿಲ್ಲ.ನನಗೆ ಯಾರೂ ಎಷ್ಟೇ ಮೆಚ್ಚಿಕೊಂಡರೂ ಅವನೊಬ್ಬ ಎಲ್ಲರಿಗಿಂತ ಹೆಚ್ಚು ಮೆಚ್ಚಿಕೊಳ್ಳಲಿ ಎಂದೇ ಅನ್ನಿಸುತಿತ್ತು.ಅವನು ನಾನಾಗಿಯೇ ಕೇಳದೆ ಏನನ್ನೂ ಹೇಳುವವನಲ್ಲ.ಹಾಗಾಗಿ ಪ್ರತೀ ಬಾರಿ ಹಾಡಿದಾಗಲೂ ಅ

ಎರಡು ಮುತ್ತಿನ ಕಥೆ..

Image
                                      " ಪುಷ್ಯರಾಗ"                                (ಎರಡು ಮುತ್ತಿನ ಕಥೆ.. ) ಸಿನಿಮಾ ನನಗೂ ಇಷ್ಟವಿಲ್ಲ.ಅವಳಿಗೂ ಇಷ್ಟವಿಲ್ಲ.ಆದರೂ ಆ ದಿನ ನಾವಿಬ್ಬರೂ ಒಟ್ಟಿಗೆ ಕುಳಿತುಕೊಂಡು ಮೂವಿಯೊಂದನ್ನು  ನೋಡಿದ್ದೆವು.ಮೂವಿ ನೆಪ ಆಗಿತ್ತು ಅಷ್ಟೇ.ಅವಳು ನನ್ನ ಹತ್ತಿರ,ನಾನು ಅವಳ ಹತ್ತಿರ,ಗ್ಯಾಪು ತುಂಬಾನೇ ಕಡಿಮೆ ಇತ್ತು. ದೆವ್ವದ್ದೇ ಮೂವಿಯದು,ಹಾಗಾಗಿ ಅಲ್ಲಲ್ಲಿ ಅವುಗಳೂ ಭೀಕರವಾಗಿಯೇ ಇದ್ದವು.ನಡುವಲ್ಲಿ ಅವಳು ತುಂಬಾ ಹೆದರಿದಳು.ಜೋರಾಗಿ ಕಿರುಚಿದಳು.ಭಯದಿಂದ ಪಕ್ಕದಲ್ಲಿದ್ದ ನನ್ನನ್ನೇ ಗಟ್ಟಿಯಾಗಿ ಅಪ್ಪಿಕೊಂಡಳು.ನಾನು ನನ್ನಷ್ಟಕ್ಕೆ ಮರದ ಗಟ್ಟಿ ಕಾಂಡದಂತಿದ್ದೆ.ಅವಳಷ್ಟೇ ತಬ್ಬಿಕೊಂಡು ನನ್ನಲ್ಲಿ ಹಬ್ಬಿಕೊಂಡ ಬಳ್ಳಿಯಾಗಿ ಬಿಟ್ಟಿದ್ದಳು."ನಿನಗೆ ಮುದ್ದಾಡಲು ಬರುವುದಿಲ್ಲ,ಸರಿಯಾಗಿ ತಬ್ಬಿಕೊಳ್ಳಲು ಬರುವುದಿಲ್ಲ,ಚೆನ್ನಾಗಿ ನಗುವುದನ್ನು ಕಲಿತಿಲ್ಲ,ಮಾತಂತು ಮೊದಲೇ ಬರುವುದಿಲ್ಲ,ಕೊನೆಯ ಪಕ್ಷ ನಿನಗೆ ಮುತ್ತೆಂದರೆ ಗೊತ್ತೇ ?.. " ಎಂದು ನನ್ನ ಉಸಿರಿಗೆ ಅವಳ ಬಿಸಿ ಉಸಿರು ಸೋಕಿಸಿ,ಕಣ್ಣೊಳಗೆ ಕಣ್ಣಳಿಸಿ ಬಹಳಷ್ಟು ನಿಟ್ಟುಸಿರು ಬಿಡುತ್ತಲೇ ಕಿವಿಯಲ್ಲಿ ಉಸುರಿದ್ದಳು ಅವಳು.ಅವಳ ಉದ್ದದ ಎರಡೂ ತೋಳುಗಳು ನನ್ನಲ್ಲಿ ಮತ್ತಷ್ಟು ಹಾಗೇ ಹರಡಿಕೊಂಡವು.ಅವಳ ಬಿಚ್ಚಿದ ಕೂದಲು ಗಾಳಿಯಲ್ಲಿ ಅದರಷ್ಟಕ್ಕೆ ಹಾರಾಡುತ್ತಿದ್ದವು,ಅದೇನೋ ಹಾಡುತ್ತಿದ್ದವು. ನಾನು ಮಾತ್ರ ಆ ಹಾರಾಡುತ್ತಿದ್ದ

ಬಣಲೆಯ ಸಜ್ಜಿಗೆ

Image
ಬರೀ ಇಷ್ಟಕ್ಕೆ ಹೊಟ್ಟೆ ಏನು ತುಂಬುವುದಿಲ್ಲ.ಹೊಟ್ಟೆ ತುಂಬದಿದ್ದರೂ ಕಣ್ಣುಗಳೆರಡು ಹಾಗೇ ಭರ್ತಿಯಾಗುವುದಂತು ಮಾತ್ರ ಸತ್ಯ.ನನಗಂತು ಆಹಾರಗಳನ್ನು ನೋಡುತ್ತಿದ್ದಂತೆಯೇ ಮೊದಲು ಅವುಗಳು ನನ್ನ ಪಂಚೇಂದ್ರಿಯಗಳನ್ನು ಸಂತೈಸಲು ಇನ್ನಿಲ್ಲದಂತೆ ಪೈಪೋಟಿಗಿಳಿದು ಬಿಡಬೇಕು,ಆಮೇಲೆ ಉದರವನ್ನು ಮೆಲ್ಲ ಮೆಲ್ಲಗೆ ಸಂತೃಪ್ತಿಗೊಳಿಸುತ್ತಾ ಬರಬೇಕು, ಜೊತೆಗೆ ಮನಸ್ಸಿನ ಉಲ್ಲಾಸಕ್ಕೂ ಅಷ್ಟಿಷ್ಟು ಕಾರಣವಾಗಿ ಬಿಡಬೇಕು.  ನಿಜ ಹೇಳಬೇಕೆಂದರೆ ನಾನು ಮೂಲತಃ ಉಪ್ಪಿಟ್ಟು ದ್ವೇಷಿ ಅಲ್ಲ,ಹಾಗಂತ ಹುಟ್ಟು ಉಪ್ಪಿಟ್ಟು ಪ್ರೇಮಿ ಕೂಡ ನಾನಲ್ಲ.'ಮನೆಯಲ್ಲಿ ಉಪ್ಪಿಟ್ಟು ಬೇಡ,ಇನ್ನು ಮುಂದೆ ಬೇಡವೇ ಬೇಡ,ಎಂತ ಅಮ್ಮ.. ಯಾವಾಗಲೂ ಮನೆಯಲ್ಲಿ ಸಜ್ಜಿಗೆಯೇ.. ' ಎಂಬ ಉಗ್ರ ಪ್ರತಿಭಟನೆಗೆ ಯಾವತ್ತೂ ಮುಂದಾದವನು ಕೂಡ ನಾನಲ್ಲ."ಈ ಪರೋಟಕ್ಕೆ ರಬ್ಬರ್ ಮ್ಯಾಟ್ ಎಂದು ಹೆಸರಿಡಬೇಕು,ಈ ಉಪ್ಪಿಟ್ಟಿಗೆ ಕಾಂಕ್ರೀಟ್ ಎಂದೇ ಶೀಘ್ರವಾಗಿ ನಾಮಕರಣ ಮಾಡಬೇಕು " ಎಂದು ಹಾಸ್ಟೆಲ್ ಗೆಳೆಯರು ಅಡುಗೆ ಭಟ್ಟರ ಕೆಟ್ಟ ಅಡುಗೆಯ ವಿರುದ್ಧ ಧ್ವನಿ ಎತ್ತಿದಾಗಲೂ ಕೂಡ ನನ್ನದೊಂದು ಬೆಂಬಲ ಹೃದಯದಿಂದ ಅವರಿಗೆ ಸಿಕ್ಕಿರಲಿಲ್ಲ.ಏಕೆಂದರೆ ನನ್ನ ಥಿಯರಿಯ ಪ್ರಕಾರ ಯಾವುದೇ ಅಡುಗೆಯನ್ನು ಮಾಡುವಂತೆ ಮಾಡಿದರೆ ತಿನ್ನದವರು ಕೂಡ ಇಷ್ಟೇ ಪಟ್ಟು ತಿನ್ನಬಹುದು ಎಂದೇ ಆಗಿತ್ತು,ಈಗಲೂ ಆ ಥಿಯರಿಯನ್ನೇ ನಾನು ನಂಬುತ್ತೇನೆ.  ಆದರೂ ಏನೇ ಹೇಳಿದರೂ ಈ ಉಪ್ಪಿಟ್ಟಿನ ಕಡೆಗೆ ಮಮಕಾರ ಕಡಿಮೆ ಇದ್ದು ಅಲ್ಪ ಸ್ವಲ್

ನಿರ್ಲಕ್ಷ್ಯದ ಗ್ರೇಪು

Image
                                   " ನಿರ್ಲಕ್ಷ್ಯದ ಗ್ರೇಪು "  ಕಣ್ಣಿಗೆ ಅಂದ ದ್ರಾಕ್ಷಿ ಗೊಂಚಲ ಕೂಟ ಹಾಗೇ ಹತ್ತೈದು ಬಾಯಿಗಿಳಿಸುವುದೆಲ್ಲಾ ರುಚಿ ನೋಡುವ ಕಂಜ್ಯೂಸಿ ಆಟ ಕೊನೆಗೆ ಅನ್ನಬೇಕು ಹುಳಿ ಹುಳಿ ಗ್ರೇಪಿದು ಇದು ನನಗಾಗದೋ ಓ ಪ್ಯಾರೇ ಬೇಟ ಕೊಡು ಯಾವುದಾದರೊಂದು ಕೆ.ಜಿ ಸಿಹಿ ಸಿಹಿ ಸೇಬು ಸೀಬೆ ಕಿತ್ತಾಳೆ ಸಪೋಟ ab

ಸಿರಿವಂತರು

Image
                                    - ಸಿರಿವಂತರು    ಅವರ ರೊಟ್ಟಿಗೆ ಎಣ್ಣೆ ಇರಲಿಲ್ಲ,ಬೆಣ್ಣೆ ಇರಲಿಲ್ಲ    ಮುರಿದು ತಿನ್ನಲು ಚಟ್ನಿ,ಪಲ್ಯ,ಕೂಟುಗಳಿರಲಿಲ್ಲ,    ನೀವೂ ರೊಟ್ಟಿ ತಿನ್ನಿ ಎಂದು ಮುಗ್ಧವಾಗಿಯೇ ಕೇಳಿಕೊಂಡಾಗ    ಅಷ್ಟೊಂದು ಅಕ್ಕರೆಯಲ್ಲಿ ಒಂಚೂರು ಬಡತನವೂ ಇರಲಿಲ್ಲ..   Ab

ಲೇಝಿ ಎಲಿಗೇನ್ಸ್ ನ ಹಿಟ್ ಮ್ಯಾನ್ ಶರ್ಮ..

Image
              " ಲೇಝಿ ಎಲಿಗೇನ್ಸ್ ನ ಹಿಟ್ ಮ್ಯಾನ್ ಶರ್ಮ.." ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಆಗ ಕಾಮೆಂಟರಿ ತಂಡದಲ್ಲಿದ್ದ ದಿನೇಶ್ ಕಾರ್ತಿಕ್,ರೋಹಿತ್ ಶರ್ಮನ ಜೊತೆ ನಡೆಸಿದ ಸಂದರ್ಶನವೊಂದರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದ,"ರೋಹಿತ್ ನಿನ್ನ ಆಟ Lazy Elegance ನಿಂದ ಕೂಡಿದೆ  ಎಂದು ಜನರು ಹೇಳುತ್ತಲೇ ಇರುತ್ತಾರೆ,ಇದರ ಬಗ್ಗೆ ನಿನ್ನ ಅಭಿಪ್ರಾಯ ಏನು? ". ಇದಕ್ಕೆ ರೋಹಿತ್ ನ ಉತ್ತರ ಹೀಗಿತ್ತು "ನನಗಿದು ಅರ್ಥವೇ ಆಗುವುದಿಲ್ಲ,ಕೇಳಲು ಈ ಮಾತು ಚಂದ ಅನಿಸಬಹುದು ಇಲ್ಲವೇ ಮೆಚ್ಚುಗೆಯೂ ಇರಬಹುದೋ ಏನೋ  ನನಗದು ಗೊತ್ತಿಲ್ಲ,ಬಹುಶಃ ನೋಡಲು ಮೇಲ್ನೋಟಕ್ಕೆ ಹಾಗೆ ಕಾಣಬಹುದು ಅಷ್ಟೇ,ಆದರೆ ಯಾವುದೇ ಆಟದಲ್ಲಿ ಆಟಗಾರನೊಬ್ಬ ತೀರಾ Lazy Elegance ಹೊಂದಿರುವುದು ಅದು ಯಾವತ್ತಿಗೂ ಸಾಧ್ಯವಾಗದು ಮಾತೇ ಆಗಿರುತ್ತದೆ.ಅದರಲ್ಲೂ ಕ್ರಿಕೆಟ್ ನಂತಹ ಆಟದಲ್ಲಿ(ವಿಶೇಷವಾಗಿ ವಿದೇಶಿ ಪಿಚ್ ಗಳಲ್ಲಿ ಆಡುವಾಗ)145 Km/h ಕ್ಕಿಂತಲೂ ಅಧಿಕ ವೇಗದಲ್ಲಿ ವೇಗದ ಬೌಲರ್ ಒಬ್ಬ ಬೌನ್ಸರ್ ಎಸೆದಾಗ ನಿಂತಲ್ಲೇ ನಿಂತುಕೊಂಡು(ಸ್ಪ್ಲಿಟ್  ಸೆಕೆಂಡ್ ನಲ್ಲಿ ಫ್ರಂಟ್ ಪುಟ್ ನಿಂದಲೇ ನೇರವಾಗಿ ಫುಲ್ ಶಾಟ್ ರೋಹಿತ್ ಹೊಡೆಯಬಲ್ಲ) ಹೊಡೆಯಲು ಈ  Lazy Elegance ನಿಂದ ಹೇಗೆ ಸಾಧ್ಯ ನೀವೇ ಹೇಳಿ? ಒಂದು ವೇಳೆ ಅಂತಹ Lazy ಇದ್ದರೆ ಬಾಲ್ ನೇರವಾಗಿ ಬಂದು ತಲೆಗೆ ಬಡಿಯುತ್ತದೆಯೇ ಹೊರತು ಇನ್ನೇನು ಆಗಲು ಸಾಧ್ಯವಿಲ್ಲ.ಆದರೂ ನಾನು ಆಟ ಶುರು ಮ

ದೂರ ಇನ್ನೂ ದೂರ..!

Image
                                        "ಪುಷ್ಯರಾಗ"                                  (ದೂರ ಇನ್ನೂ ದೂರ....!)         " ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ           ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ,            ಅವನ ನಿಯಮ ಮೀರಿ ಇಲ್ಲಿ ಏನು ಸಾಗದು           ನಾವು ನೆನೆಸಿದಂತೆ ಬಾಳಲೇನು ನಡೆಯದು..            ವಿಷಾದವಾಗಲಿ,ವಿನೋದವಾಗಲಿ           ಅದೇನೆ ಆಗಲಿ ಅವನೆ ಕಾರಣ..            ಬಾನಿಗೊಂದು ಎಲ್ಲೆ ಎಲ್ಲಿದೆ,           ನಿನ್ನಾಸೆಗೆಲ್ಲಿ ಕೊನೆಯಿದೆ            ಏಕೇ ಕನಸು ಕಾಣುವೆ,           ನಿಧಾನಿಸು ನಿಧಾನಿಸು....... " - ಉಹೂಂ...ಬೇಡ,ಈ ಹಾಡು ಬೇಡ,ಬದಲಾಯಿಸು! - ಏಕೆ..? - ಇಷ್ಟವಾಗಲಿಲ್ಲ!!  - ಹ್ಞೂಂ.. ಮತ್ತೆ ಇದು?         " ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು           ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು,            ನಿನ್ನ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ           ಜೀವನಾ ಸಾಗದು ಜೀವನಾ ಸಾಗದು...                     ಸೂರ್ಯ ಬರದೆ ಕಮಲವೆಂದು ಅರಳದು           ಚಂದ್ರನಿರದೆ ತಾರೆಯೆಂದು ನಲಿಯದು,            ಸೂರ್ಯ ಬರದೆ ಕಮಲವೆಂದು ಅರಳದು           ಚಂದ್ರನಿರದೆ ತಾರೆಯೆಂದು ನಲಿಯದು..           ಒಲವು ಮೂಡದಿರಲು ಮನವು ಅರಳದು           ಮನವು ಅರಳದಿರಲು ಗೆಲುವು ಕಾಣದು           ಮನ