ನಿಜವಾಗಿಯೂ ಕನ್ನಡದ ಪಾಲಿಗೆ ಅವರು ವರನಟನೇ ಹೌದು..
ರಾಜಕುಮಾರ್ ಹಾಡಿದ ಹೆಚ್ಚಿನ ಹಳೆಯ ಹಾಡುಗಳು ನನಗೆ ಇಷ್ಟ.ಈಗಲೂ ನನ್ನ ಬಳಿ ಅವರ ಹಾಡುಗಳ ಸಾಕಷ್ಟು ಸಂಗ್ರಹ ಇದೆ.ಆವಾಗವಾಗ ಕೇಳುತ್ತಲೇ ಇರುತ್ತೇನೆ.ಹಾಡು ಹಳೆಯದಾದರೇನು ಭಾವ ನವ ನವೀನ. ಹಳೆಯ ಸಾಹಿತ್ಯ ಕೂಡ ಅಷ್ಟೇ ಚಂದ,ಜೊತೆಯಲ್ಲಿ ರಾಜಕುಮಾರ್ ಅವರ ಹಿತವೆನಿಸುವ ಧ್ವನಿ.ಎಸ್.ಜಾನಕಿ,ಬಾಲಸುಬ್ರಹ್ಮಣ್ಯಂ,ಪಿ.ಬಿ ಶ್ರೀನಿವಾಸ್,ಅಶ್ವಥ್ ಅವರಂತೆಯೇ ಗಾಯಕ ರಾಜಕುಮಾರ್ ಕೂಡ ಎಂದಿಗೂ ಇಷ್ಟ ಆಗುತ್ತಾರೆ.
ಏನೇ ಹೇಳಿ ರಾಜಕುಮಾರ್ ತುಂಬಾನೇ ಸ್ಪುರದ್ರೂಪಿ ನಟ ಕೂಡ ಹೌದು.ಈಗಲೂ ಪೌರಾಣಿಕ ಪಾತ್ರಗಳಾದ ಪಾರ್ಥ,ಕೃಷ್ಣದೇವರಾಯ,ಮಯೂರ,ಬಬ್ರುವಾಹನ,ಶ್ರೀಕೃಷ್ಣ, ಸತ್ಯ ಹರಿಶ್ಚಂದ್ರ,ಕಾಳಿದಾಸ.. ಎಂದರೆ ರಾಜ್ಕುಮಾರ್ ಅವರೇ ಕಣ್ಣ ಮುಂದೆ ಬಂದು ನಿಂತು ಬಿಡುತ್ತಾರೆ.
ಆ ಕಣ್ಣು,ಆ ನಗು..ಎಲ್ಲಾ ನವರಸಗಳು.. ಆಹಾ.. ಆಹಾ..
ಅದರಲ್ಲೂ ಹಿರಣ್ಯಕಶಿಪುವಿನ ಆ ಉದ್ದದ ಡೈಲಾಗ್ .. " ಹ್ಞೂಂ... ನಾನಾರು ಕಶ್ಯಪ ಬ್ರಹ್ಮನ ಮಗ,ವಿಧಿಗರ್ಭ ಸಂಜಾತ ಚತುರ್ಮುಖ ಬ್ರಹ್ಮನ ಮೊಮ್ಮಗ....ವಿಧಾತನಿಂದ ವಿಧಿಬರಹವನ್ನೆ ಬದಲಾಯಿಸಿ ಮರಣವನ್ನೆ ಮೆಟ್ಟಿನಿಂತ ಮಹಾವೀರ,ಅದಿತಿಯ ಮಕ್ಕಳ ಅಟ್ಟಹಾಸವನ್ನ ಸುಟ್ಟು,ಆದಿತ್ಯನ ಅಟ್ಟಹಾಸವನ್ನು ಮಟ್ಟ ಹಾಕಿದ ಸಾಹಸಿ,ಅತಳ ವಿತಲ ಸುತಳ ರಸಾತಳ ತಳಾತಳ ಮಹಾತಳ ಪಾತಾಳಗಳನ್ನು ಪಾದದಡಿಯಲ್ಲಿ ತುಳಿದಿಟ್ಟ ಪರಾಕ್ರಮಶಾಲಿ... " ಈಗಲೂ ಪದೇ ಪದೇ ಕೇಳಬೇಕು ಎಂದೆನಿಸುತ್ತದೆ.
ಬಬ್ರುವಾಹನದ "ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತೀವ್ರತೆಯನ್ನು ನಿಂದಿಸಿದ ಮರುಕ್ಷಣವೆ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ... " ಡೈಲಾಗ್ ಎಂದಿಗೂ ಹಳೆಯದ್ದು ಆಗಿಯೇ ಇಲ್ಲ.
ಇಂತಹ ನೆನಪಿನಲ್ಲಿ ಉಳಿಯುವ ಹಲವಾರು ಡೈಲಾಗುಗಳನ್ನು ಅವರು ಹೇಳಿದ್ದಾರೆ.. ಒಳ್ಳೆಯ ಸಾಮಾಜಿಕ ಮೌಲ್ಯಗಳಿರುವ ಚಿತ್ರಗಳನ್ನು ಕೊಟ್ಟಿದ್ದಾರೆ.. ಅವರು ಸಿರಿಕಂಠದಲ್ಲಿ ಹಾಡಿರುವ ಹಾಡುಗಳು ಇಂದಿಗೂ ಜೀವಂತವಾಗಿಯೇ ಇದೆ.
ಇವತ್ತು ಅವರ ಹುಟ್ಟಿದ ದಿನ. ಎಲ್ಲರೂ ಅವರನ್ನು ನೆನಪಿಕೊಳ್ಳುವಾಗ ಅವರು,ಅವರ ಪಾತ್ರಗಳು, ಅವರ ಹಾಡುಗಳು, ಅವರ ಡೈಲಾಗ್ ಗಳು ಕೂಡ ಅಷ್ಟೇ ನೆನಪಾದವು.
ನಿಜವಾಗಿಯೂ ಕನ್ನಡ ಪಾಲಿಗೆ ಅವರು ವರನಟನೇ ಹೌದು❤️😌
#ಏನೋ_ಒಂದು..
Ab Pacchu
Moodbidri
Comments
Post a Comment