ಒಂದು ಉಗ್ರ ಪ್ರತಿಭಟನೆ
ಬ್ರೇಕು ಗಾಡಿಗೆ ಮಾತ್ರ ಇರಬೇಕು,
ಕನಸಿಗೆ ಇರಬಾರದು.
ಹಾಗಂತ ಅಂದುಕೊಂಡರೂ.. ಒಳ್ಳೆಯ ಕನಸಿಗೆ ಮುಂಜಾನೆ ಎಂಬುವುದು ಒಂಥರಾ ಇಷ್ಟವಿಲ್ಲದ ಬ್ರೇಕ್ ಇದ್ದ ಹಾಗೆ.
ರಾತ್ರಿ ಬಹಳ ಚಂದದ ಕನಸ್ಸು ಬಿದ್ದಿತ್ತು.
ಕನಸಿನಲ್ಲಿ ನನ್ನ ನೇತೃತ್ವದಲ್ಲಿ ಕೊಡಪಾನ ಹಿಡಿದುಕೊಂಡು ನಮ್ಮ ಹಳ್ಳಿಯ ಮಹಿಳೆಯರು ನಡೆಸಿದ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ಕೈ ಮೀರಿ ಅತ್ಯುಗ್ರ ಹಂತಕ್ಕೆ ತಲುಪಿ,ನೀರಿಗಾಗಿ ತಮ್ಮ ಪ್ರಾಣ ಕೊಡುತ್ತೇವೆ ಎಂದು ಬಂದಿದ್ದ ಮಹಿಳೆಯರೇ ಸ್ವತಃ ತಮ್ಮ ಕೊಡಪಾನದಿಂದ ಪಂಚಾಯಿತಿ ಅಧ್ಯಕ್ಷ ಹಾಗೂ ಸದ್ಯಸರುಗಳಿಗೆ ಚೆನ್ನಾಗಿ ಥಳಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಮಾತ್ರವಲ್ಲ ಅವರುಗಳ ಪ್ರಾಣ ತೆಗೆಯುವ ರೇಂಜಿಗೆಯೇ ನಮ್ಮ "ನೀರಿಗಾಗಿ ಪ್ರಾಣ ಕೊಡುವೆವು" ಎಂಬ ಉಗ್ರ ಪ್ರತಿಭಟನೆ ತಲುಪಿತ್ತು.
ಕೊನೆಗೆ ನಮ್ಮ ಈ ರೀತಿಯ ಉಗ್ರ ಪ್ರತಿಭಟನೆಗೆ ದಂಗಾಗಿ,ಭಯ ಬಿದ್ದು... ಊರಿನ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಡುತ್ತೇವೆ ಎಂಬ ಭರವಸೆ ಕೂಡ ಪಂಚಾಯಿತಿ ಅಧ್ಯಕ್ಷರಿಂದ ಸಿಕ್ಕಿ ಬಿಟ್ಟಿತ್ತು.ಮಹಿಳೆಯರು ಕೊನೆಯಲ್ಲಿ "ನೀಲಮೇಘನಿಗೆ.... ಜೈ", "ನೀಲುವಿಗೆ.... ಜೈ" , " ಮಣ್ಣಿನ ಮಗ ನೀಲುವಿಗೆ... ಜೈ", " ಸಮಾಜ ಸುಧಾರಕ - ಬಡವರ ಬಂಧು - ಆಕಾಶದೀಪ - ಆಶಾಕಿರಣ ನೀಲುವಿಗೆ... ಜೈ" ಅಂತೆಲ್ಲಾ ಸಿಕ್ಕಾಪಟ್ಟೆ ಘೋಷಣೆ ಕೂಗುತ್ತಾ ಖುಷಿಯಿಂದಲೇ ಮನೆಗೆ ಮರಳಿದ್ದನ್ನು... ಕನಸಿನಲ್ಲಿ ಕಂಡು ನನ್ನ ಮೇಲೆಯೇ ನನಗೆ ಮೊದಲ ಬಾರಿಗೆ ಭಯಂಕರ ಅಭಿಮಾನವೊಂದು ಮೂಡಿತ್ತು.
ಆಹಾ.. ಎಂತಹ ಸೊಗಸಾದ ಕನಸದು.
ಬೇಗ ಏಳಲು ಮನಸ್ಸಿರದಿದ್ದರೂ ಕೂಡ ಪ್ರತಿಭಟನೆಯ ನೆನಪಾಗಿ ಕೊನೆಗೂ ಎದ್ದು ಬಿಟ್ಟೆ.
ನಾನು ಅಂದು ಮಲಗಿದ್ದು ಸಹ ನಮ್ಮ ಮನೆ ಆಗಿರದೆ, ಪಕ್ಕದ ಮಿಲಿಟ್ರಿ ಮೋನಪ್ಪನವರ ಹೊಸ ಗೃಹಪ್ರವೇಶದ ಮನೆ ಅದಾಗಿತ್ತು.
ನಮ್ಮ ಮನೆಯವರು,ದೊಡ್ಡಪ್ಪನ ಮನೆಯವರು, ಕೆಳಗಿನ ಬೈಲು ಮನೆಯವರೆಲ್ಲಾ ಹಿಂದಿನ ದಿನವೇ ತಿರುಪತಿಗೆ ಹೋಗಿದ್ದರು.
ಹಾಗಾಗಿ ರಾತ್ರಿ ಅಂಕಲ್ ಗೆ ಕಂಪನಿ ಕೊಡುತ್ತಾ ಚೆನ್ನಾಗಿ ಕುಡಿದು,ಕೊನೆಗೆ ಅವರ ಮನೆಯಲ್ಲಿಯೇ ಮಲಗಿದ್ದೆ ನಾನು.
ಇಂದು ನಡೆಯಬೇಕಾಗಿದ್ದ "ನೀರಿಗಾಗಿ ಪ್ರಾಣ ಕೊಡುವೆವು.." ಎಂಬ ಉಗ್ರ ಪ್ರತಿಭಟನೆ ಯಶಸ್ವಿಯಾಗಲು ನನ್ನ ಉಪಸ್ಥಿತಿಯಂತು ಬಹಳನೇ ಅತ್ಯಗತ್ಯವಾಗಿತ್ತು.
ನಿನ್ನೆ ರಾತ್ರಿ ಬಿದ್ದ ಕನಸ್ಸಿನಲ್ಲೆನೋ ಅದು ಭಯಂಕರ ಯಶಸ್ವಿಯಾಗಿತ್ತು ಆದರೆ ಅದನ್ನು ಸಾಕಾರಗೊಳಿಸಲು ಇಂದು ನಾವೆಲ್ಲರೂ ಸೇರಿ ಒಟ್ಟಿಗೆ ಫೀಲ್ಡ್ ಗೆನೇ ಇಳಿಯಬೇಕಾಗಿತ್ತು.
ಅದು ಬೇರೆ ಊರಿನ ಸಾಮಾಜಿಕ ಹೋರಾಟಗಾರ, ಚಳುವಳಿಗಳ ಹರಿಕಾರ,ನಿರಂತರ ಧರಣಿ ಗಳ ನೇತಾರ ದಾಮಣ್ಣ ಹಿಂದಿನ ದಿನವೇ ಕಾಲ್ ಮಾಡಿ.. ಬೆಳಿಗ್ಗೆ ಬೇಗ ಮಾರಾಯ.. ಎಂದು ಹತ್ತಾರು ಬಾರಿ ಹೇಳಿ ತಲೆ ತಿಂದಿದ್ದರು.
ಅವರ ನಿಜ ಹೆಸರು ದಾಮೋದರ ಅಂತ.ಆದರೆ ನಿರಂತರವಾದ ಹೋರಾಟ, ಧರಣಿಗಳ ಕಾರಣದಿಂದಾಗಿ ಈ ಸಮಾಜ ಹಾಗೂ ನಮ್ಮ ಪುಲ್ಕಿಯಲ್ಲಿ ಜನತೆ ಅವರನ್ನು ಧರಣಿ ದಾಮಣ್ಣ ಎಂದೇ ಗುರುತಿಸುತ್ತಾರೆ.
ನನ್ನಂತಹ ಹುಡುಗರಿಗೆ ನಮ್ಮ ಹಳ್ಳಿಯಲ್ಲಿ ಅವರೇ ಅತೀ ದೊಡ್ಡ ಮಾರ್ಗದರ್ಶಕರು.. ಅವರ ಜೊತೆ ಸೇರಿ ನಾನು ಸಕ್ರೀಯವಾಗಿ ಹಲವಾರು ಚಳುವಳಿಗಳಲ್ಲಿ ಬಸ್ ತಡೆ,ರೋಡಿನಲ್ಲಿ ಟಯರ್ ಹೊತ್ತಿಸುವುದು,ರಸ್ತೆಯ ಗುಂಡಿ ಬಿದ್ದಾಗ ಬಾಳೆಗಿಡ ನೆಡುವುದು,ಹಳ್ಳಿಯಲ್ಲಿ ಸಮಸ್ಯೆ ಆದಾಗ ಪಂಚಾಯತ್ ಚಲೋ ಎಂದು ಹಳ್ಳಿಯ ಜನರಿಗೆನೇ ಅಂತಹ ಆಸಕ್ತಿ ಇಲ್ಲದಿದ್ದರೂ ರೋಡಿನಲ್ಲಿ ಒಂದಷ್ಟು ಜನರನ್ನು ಒಟ್ಟು ಸೇರಿಸಿ ಪಂಚಾಯಿತಿವರೆಗೆ ಘೋಷಣೆ ಕೂಗುತ್ತಾ ಹೋಗುವ ಭಯಂಕರ ಆಂದೋಲನಗಳನ್ನು ಕೂಡ ಹಲವಾರು ಮಾಡಿದ್ದೇನೆ.ಅವರು ಈ ವಿಷಯದಲ್ಲಿ ನನಗೆ ಗುರು ಇದ್ದ ಹಾಗೆ ಮತ್ತು ನಾನು ಅವರ ಕಟ್ಟರ್ ಶಿಷ್ಯ.
ಊರಿನ ಅತೀ ಸಿರಿವಂತನಾದ ದಾಮಣ್ಣನದ್ದು ಭಯಂಕರ ಹೋರಾಟದ ಫ್ಯಾಮಿಲಿ.
ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಅವರ ಮನೆಯವರೆಲ್ಲ ಜೈಲು ಊಟ ಎಲ್ಲಾ ಬಹಳ ಚೆನ್ನಾಗಿ ಮಾಡಿದ್ದಾರೆ ಅಂತೆ.
ಅದೊಂದು ಹೋರಾಟದ ಪರಂಪರೆಯನ್ನು ಬಿಡಬಾರದು ಎಂದು ನಯಾಪೈಸೆ ಲಾಭ ಇರದಿದ್ದರೂ ಸಹ,ಪುಲ್ಕಿಯಲ್ಲಿ ಏನೇ ಸಮಸ್ಯೆ ಬಂದರೂ ಸಮಸ್ಯೆಯ ವಿರುದ್ಧ ಧ್ವನಿ ಎತ್ತುವ, ಒಂದರ ಮೇಲೆ ಒಂದರಂತೆ ಪ್ರತಿಭಟನೆ ಮಾಡುವ ಹಾಗೂ ಪ್ರತಿಯೊಂದಕ್ಕೂ ತನ್ನ ಕೈಯಿಂದಲೇ ಹಣ ಹಾಕಿ ಖರ್ಚು ಮಾಡುವ ಈ ದಾಮಣ್ಣ ನನಗೆ ತುಂಬಾನೇ ಇಷ್ಟ.ಅವರಿಗೆ ಕೂಡ ನಾನೆಂದರೆ ಅಷ್ಟೇ ಇಷ್ಟ. ಹೊಸ ಹೊಸ ರೀತಿಯಲ್ಲಿ ಪ್ರತಿಭಟನೆ, ಹೋರಾಟ, ಜಾಥಾ ಎಲ್ಲಾ ಹೇಗೆ ಮಾಡಬಹುದು ಎಂದು ಅವರಿಗೆ ಐಡಿಯಾಗಳನ್ನು ಕೊಡುವುದು ಯಾವಾಗಲೂ ನಾನೇ.
ಹಾಗಾಗಿ ಹೋರಾಟ ಅಂತ ಬಂದಾಗ ನಾನೇ ಅವರ ಬಲಗೈ ಬಂಟ. ಅವರು ಜಸ್ಟ್ ಮುಂದೆ ಇರ್ತಾರೆ ಅಷ್ಟೇ. ಹೋರಾಟದ ರೂಪುರೇಷೆ, ಮಾಸ್ಟರ್ ಪ್ಲಾನ್ ಎಲ್ಲಾ ನಂದೇ.ಕಳೆದ ಬಾರಿ ಮಳೆ ಬರದೇ ಇದ್ದಾಗ ಕಪ್ಪೆಗಳ ಮದುವೆ ಮಾಡಲು ಐಡಿಯಾ ಕೊಟ್ಟದ್ದು ಸ ನಾನೇ. ಆಮೇಲೆ ಸಿಕ್ಕಾಪಟ್ಟೆ ಅತೀ ಘೋರ ಮಳೆ ಬಂದು ಒಂದೆರಡು ಮನೆ ಕೂಡ ಕುಸಿದು ಬಿದ್ದು ನೆಲಸಮವಾಗಿತ್ತು.ನಮ್ಮ ಹೋರಾಟಗಳ ಫಲಶ್ರುತಿ ಗಳು ಎಂದಿಗೂ ಇಂತಹದ್ದೇ ಆಗಿರುತ್ತದೆ.
ಟೈಂ ಬೇರೆ ಆಗುತ್ತಾ ಬಂತು.
ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಮೋನಪ್ಪನವರ ಮಗಳು ಬುಲೆಟ್ ಭಾಮಳ ಬಳಿ.. ಇವತ್ತು ಪ್ರತಿಭಟನೆ ಇದ್ದಲ್ಲಿಗೆ ಹೋಗಲು ಬುಲೆಟ್ ಕೂಡ ಕೇಳಿದ್ದೆ,ಅದಕ್ಕೆ ಅವಳು... ನಿಮ್ಮನ್ನು ನಾನೇ ಬೈಕ್ ನಲ್ಲಿ ಬಿಡ್ತಾಳೆ.. ಎಂದು ಹೇಳಿದ್ದ ಅಸ್ಪಷ್ಟ ನೆನಪು ಹಾಗೇ ಮತ್ತೊಮ್ಮೆ ನೆನಪಾಯಿತು.
ಎದ್ದವನೇ ಅವಳನ್ನೇ ಹುಡುಕಿದೆ.
ಬೇಗ ಎದ್ದು ಸ್ನಾನ ಎಲ್ಲಾ ಮಾಡಿ ಅಡುಗೆ ಮನೆಯಲ್ಲಿ ಶ್ರದ್ಧೆಯಿಂದ ಇಡ್ಲಿ ಮಾಡುತ್ತಿದ್ದಳು ಭಾಮ.
ಅಪ್ಪ ಮಗಳು ಇಬ್ಬರೇ ಇರುವುದು ಆ ಹೊಸಮನೆಯಲ್ಲಿ.
ಅಪ್ಪ ರಿಟೈರ್ಡ್ ಮಿಲಿಟರ್ ಆಫೀಸರ್.
ಹಾಗಾಗಿ ಮನೆಯಲ್ಲಿ ತಿಂಡಿ ಗಿಂಡಿ ಎಲ್ಲಾ ಅವಳೇ ಮಾಡುವುದು.
ಅವಳು ಮಾತು ಸಿಕ್ಕಾಪಟ್ಟೆ ಕಮ್ಮಿ.
ಏನಿದ್ದರೂ.. ಹಾಂ.. ಹೂಂ.. ಓಕೆ.. ಜಾಸ್ತಿ ಎಂದರೆ ಒಂದು ಇಲ್ಲವೇ ಎರಡು ಸಾಲಿನ ಉತ್ತರ.. ಅಷ್ಟೇ.
ಆದರೂ ಭಾಮ ಸಿಕ್ಕಾಪಟ್ಟೆ ಒಳ್ಳೆಯವಳ ಹಾಗೆ ಕಾಣುತ್ತಾಳೆ.
ಇವಳನ್ನು ಕೂಡ ನನ್ನ ಮಾಮೂಲಿ ದೋಸ್ತಿ ಗ್ಯಾಂಗಿಗೆ ಸೇರಿಸಿಬಿಟ್ಟರೆ ನಮ್ಮ ಹಳ್ಳಿಯ ಹೋರಾಟಕ್ಕೆಲ್ಲಾ ಇವಳು ಮುಂದೊಂದು ದಿನ ಬಹಳ ದೊಡ್ಡ ಆಸ್ತಿ ಆಗಬಲ್ಲಳು ಎಂದು ಮನಸ್ಸಿನಲ್ಲಿಯೇ ಯೋಚಿಸಿದೆ.
ಅಡುಗೆ ಕೋಣೆಗೆ ಹೋಗಿ ಹಬೆಯಾಡುವ ಇಡ್ಲಿ ಪಾತ್ರೆಯಿಂದ ಒಂದೊಂದೇ ಇಡ್ಲಿಗಳನ್ನು ಸ್ಪೂನ್ ಸಹಾಯದಿಂದ ತೆಗೆದು ಬೇರೆ ಪಾತ್ರೆಗೆ ಹಾಕುತ್ತಿದ್ದ ಭಾಮಳಿಗೆ ನನ್ನ ಪ್ರತಿಭಟನೆಯ ವಿಷಯ ನೆನಪಿಸಿದೆ.
ಅದಕ್ಕೆ ಅವಳು.. ಬೇಗ ಸ್ನಾನ ಮಾಡಿ ರೆಡಿ ಆಗಿ. ತಿಂಡಿ ತಿಂದು ಒಟ್ಟಿಗೆ ಅಲ್ಲಿಗೆ ಹೋಗುವ.ನನಗೆ ಕೂಡ ನಿಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಬೇಕು... ಎಂದು ಹೇಳಿ ಮುಗಿಸಿ ಮತ್ತೆ ಒಂದೊಂದೇ ಇಡ್ಲಿಯನ್ನು ತೆಗೆದು ಪಾತ್ರೆಗೆ ಹಾಕತೊಡಗಿದಳು.
ಆಹಾ... ಇವಳು ಕೂಡ ನಮ್ಮ ಹೋರಾಟದ ಬೆಲೆಯನ್ನು ಅರಿತು,ಅದರ ಘನತೆ ಗೌರವಕ್ಕೆ ಸಿಕ್ಕಾಪಟ್ಟೆ ಮಾರ್ಯದೆ ಕೊಡುವುದನ್ನು ನೋಡಿ...ಅದರಲ್ಲೂ ಪ್ರತಿಭಟನೆಯನ್ನು ನೋಡುವುದನ್ನು ಮಾತ್ರವಲ್ಲ ಅದರಲ್ಲಿ ತಾನೂ ಕೂಡ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಅವಳ ಈ ಮನೋಭಾವ ಕಂಡು.. ನನಗೆ ನಾನು ಇಷ್ಟು ದಿನ ಮಾಡಿದ ಹೋರಾಟ ಎಲ್ಲಾ ಇಂದು ಸಾರ್ಥಕ ಆಯಿತೆಂದು ಒಮ್ಮೆ ಅನಿಸಿತು.ಏನೇ ಆಗಲಿ ನಮ್ಮ ಹಳ್ಳಿಯಲ್ಲಿ ನನ್ನ ಹೋರಾಟಕ್ಕೆ ದಿನೇ ದಿನೇ ಕಳೆ ಬರುತ್ತಿರುವುದನ್ನು ನೋಡಿ ನನಗೆ ನನ್ನ ಬಗ್ಗೆಯೇ ಸಿಕ್ಕಾಪಟ್ಟೆ ಹೆಮ್ಮೆ ಮೂಡಿತು.
ಕೆಳಗಿನ ಬೈಲು ಮನೆಯಲ್ಲಿ ಪೊಲ್ಲ(ಪುರಂದರ) ಮತ್ತು ರುಕ್ಕು(ರುಕ್ಮಿಣಿ) ಮನೆಯಲ್ಲಿಯೇ ಇದ್ದರು.ಅವರಿಬ್ಬರು ನಿನ್ನೆ ತಿರುಪತಿಗೆ ಹೋಗಿರಲಿಲ್ಲ..
ಈಗ ಪೊಲ್ಲನಿಗೆ ಕಾಲೇಜ್ ಗೆ ರಜೆ ಬೇರೆ ಉಂಟು.
ಅವನು ಸ್ವಲ್ಪ ಅತೀ ಉತ್ಸಾಹಿ ಆದರೂ
ಪ್ರತಿಭಟನೆಯ ಸಮಯದಲ್ಲಿ ನನಗೆ ಅಸಿಸ್ಟೆಂಟ್ ಆಗಿ ಯಾವುದಾದರೂ ಒಂದು ಕೆಲಸಕ್ಕೆ ಬಂದೇ ಬರುತ್ತಾನೆ ಹಾಗಾಗಿ ಅವನನ್ನು ಕೂಡ ಕರೆದುಕೊಂಡು ಹೋಗುವುದೇ ಬೆಟರ್ ಎಂದು ಅನಿಸಿತು.
ಅವನಿಗೆಯೇ ಕಾಲ್ ಮಾಡಿ ಹೇಳಿದೆ..
ಪೊಲ್ಲ, ನಾವು ಪ್ರತಿಭಟನೆ ನಡೆಯುವಲ್ಲಿಗೆ ಹೋಗುತ್ತಿದ್ದೆವೆ. ನೀನು ಬರುವುದಾದರೆ ಹತ್ತು ನಿಮಿಷದ ಒಳಗೆಯೇ ಬರಬೇಕು.. ಜಾಸ್ತಿ ಕಾಯುವುದಿಲ್ಲ.. ಎಂದು ಫೋನ್ ಕಟ್ ಮಾಡಿದೆ.
ಆ ನಂತರ ಸ್ನಾನ ಮಾಡಿ, ಭಾಮ ಬಡಿಸಿದ ಬಿಸಿ ಇಡ್ಲಿಯನ್ನು ತೆಂಗಿನ ಕಾಯಿ ಚಟ್ನಿಯೊಂದಿಗೆ ತಿಂದು, ಭಾಮನ ಮನೆಯಿಂದ ನೇರವಾಗಿ ಪ್ರತಿಭಟನೆ ನಡೆಯುವಲ್ಲಿಗೆ ಹೋಗಲು ರೆಡಿ ಆದೆ.
ಭಾಮ ಮೋನಪ್ಪ ಅಂಕಲ್ ಗೆ.. ತಿಂಡಿ ಮಾಡಿಟ್ಟಿದ್ದೇನೆ ಅಪ್ಪ. ಬೇಗ ಸ್ನಾನ ಮಾಡಿ ನೀವು ಕೂಡ ತಿಂಡಿ ತಿನ್ನಿ..ನಮ್ಮದು ಆಯಿತು.. ಇವತ್ತು ಹಳ್ಳಿಯಲ್ಲಿ ಪ್ರತಿಭಟನೆ ಇದೆ ಅಂತೆ.. ನಾನು ನೀಲು ಜೊತೆ ಪ್ರತಿಭಟನೆಗೆ ಹೋಗಿ ಬರುತ್ತೇನೆ.. ಎಂದು ಹೇಳಿದಳು.
ಅದಕ್ಕೆ ತಲೆಯಾಡಿಸಿದ ಮಿಲಿಟ್ರಿ ಮೋನಪ್ಪ ಅಂಕಲ್ ನನ್ನನ್ನೇ ನೋಡಿ... All the best ಯಂಗ್ ಮ್ಯಾನ್... ನಿಮ್ಮ ಹೋರಾಟಕ್ಕೆ ಜಯವಾಗಲಿ, ನನಗೆ ಸ್ವಲ್ಪ ಕಾಲು ನೋವು.. ಇಲ್ಲದಿದ್ದರೆ ನಾನು ಕೂಡ ನಿಮ್ಮನ್ನು Join ಆಗ್ತಿದ್ದೆ.. ಮುಂದಿನ ಬಾರಿ ಮಾತ್ರ ನಾನು ಖಂಡಿತವಾಗಿಯೂ ಮಿಸ್ ಮಾಡಲ್ಲ.. ಈಗ ಹೋಗಿ ಬನ್ನಿ.. ಒಳ್ಳೆಯದಾಗಲಿ.. ಎಂದರು.
ಆಹಾ... ನಿವೃತ್ತ ಯೋಧ ಕೂಡ ನನ್ನ ಹೋರಾಟಕ್ಕೆ ಈ ರೇಂಜಿಗೆ ಹಾರೈಸುತ್ತಿದ್ದಾರೆ ಅಂದರೆ ನಾನು ಖಂಡಿತವಾಗಿಯೂ ಈ ಹೋರಾಟಗಳ ಮೂಲಕ ಒಂದು ದಿನ ಎಲ್ಲೋ ಹೋಗಿಬಿಡುತ್ತೇನೆ...ಎಂದು ನನಗೆಯೇ ಅನಿಸಿತು.
ನಂತರ ಭಾಮ ಅವಳ ಬುಲ್ಲೆಟ್ ಬೈಕ್ ತೆಗೆದಳು.
ಅವಳ ಬುಲ್ಲೆಟ್ ಅವಳೇ ಬಿಡುವುದು.
ಅವಳ ಹೆಸರೇ ಬುಲ್ಲೆಟ್ ಭಾಮ ಅಲ್ವಾ... ಹಾಗಾಗಿ ನಮ್ಮದೇನಿದ್ದರೂ ಜಸ್ಟ್ ಹಿಂದೆ ಕುಳಿತುಕೊಳ್ಳುವ ಕೆಲಸ ಅಷ್ಟೇ.
ಬೈಕ್ ಅಲ್ಲಿ ಕುಳಿತುಕೊಂಡು ಭಾಮಳ ಮನೆಯ ಕಾಂಪೌಂಡ್ ನಿಂದ ಹೊರಗೆ ಬಂದು ... ಈ ಮಾರಿ ಪೊಲ್ಲ ಎಲ್ಲಿ... ಇನ್ನೂ ಏಕೆ ಬರಲಿಲ್ಲ ಎಂದು ಯೋಚಿಸುತ್ತಿರುವಾಗಲೇ,ನೆನೆದವರ ಮನದಲ್ಲಿ ಎಂಬಂತೆ.. ತನ್ನದೊಂದು ಹಳೆ ಶಿಲಾಯುಗದ ಜಮಾನಕ್ಕೆ ಸೇರಿದ ಸ್ಕೂಟಿಯೊಂದಿಗೆ ಅಲ್ಲಿಗೆ ಬಂದೇ ಬಿಟ್ಟ ಪೊಲ್ಲ.ಕೇವಲ ಒಬ್ಬನೇ ಬರಲಿಲ್ಲ ಅವಳದೊಂದಿಗೆ ಅವನ ಅಕ್ಕ ರುಕ್ಕುವನ್ನು ಕೂಡ ಕರೆದುಕೊಂಡು ಬಂದಿದ್ದ.
ಬಂದವನೇ ಭಾಮನಿಗೆ.. ಹಾಯ್ ಭಾಮಕ್ಕ ಎಂದು ವಿಶ್ ಮಾಡಿದ.ರುಕ್ಕು ಕೂಡ ಭಾಮಳಿಗೆ ಕೈ ಬೀಸಿ ವಿಶ್ ಮಾಡಿದಳು.ಇವರಿಗೆಲ್ಲಾ ಜಸ್ಟ್ ನಿನ್ನೆಯ ಗೃಹಪ್ರವೇಶದ ದಿನವೇ ಪರಿಚಯ ಆಗಿದ್ದರೂ ಸಹ, ಎಷ್ಟೋ ವರ್ಷಗಳ ಜನುಮ ಜನುಮದ ಗೆಳೆತನ ಇರುವಂತೆ ಮಾಡುತ್ತಿದ್ದಾರೆ.ಇರಲಿ ಇರಲಿ ಎಲ್ಲರೂ ನೆರೆಹೊರೆಯವರು ಈ ರೀತಿಯಾಗಿ ಅನ್ಯೋನ್ಯವಾಗಿ ಫ್ರೆಂಡ್ಸ್ ತರಹ ಇದ್ದರೆ ನನಗೂ ನನ್ನ ಹೋರಾಟಕ್ಕೂ ಹಾಗೂ ಇತರ ಕೆಲಸಗಳಿಗೆ ಬಹಳ ಲಾಭವಿದೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ಇನ್ನೂ ಕಾಲೇಜ್ ಓದುತ್ತಿರುವ ಪೊಲ್ಲ ನನಗಿಂತ ಆರು ವರ್ಷ ಚಿಕ್ಕವನು. ಜಸ್ಟ್ P.G ಮುಗಿಸಿರುವ ರುಕ್ಕು ಹೆಚ್ಚು ಕಡಿಮೆ ಭಾಮಳ ವಯಸ್ಸಿನವಳೇ. ಇಬ್ಬರೂ ನನಗಿಂತ ಮೂರ್ನಾಲ್ಕು ವರ್ಷ ಚಿಕ್ಕವರು ಅಷ್ಟೇ. ರುಕ್ಕು ಮತ್ತು ಪೊಲ್ಲನ ಅಕ್ಕ ರಾಧ(ಅನುರಾಧ) ನನ್ನ ಬಾಲ್ಯದ ಗೆಳತಿ,ಸಹಪಾಠಿ ಎಲ್ಲವೂ ಹೌದು. ಅವಳು ಕೂಡ ಈಗ ನಮ್ಮ ಮನೆಯ ಮೇಲಿನ ರೂಮಿನಲ್ಲಿ ಬಾಡಿಗೆಗೆ ಇರುವುದು. ಮದುವೆ ಆದ ಒಂದೇ ವರ್ಷದಲ್ಲಿ ಅವಳ ಗಂಡ ಕೂಡ ತೀರಿ ಹೋಗಿ ಈಗ ಅವಳು ಮತ್ತು ಅವಳ ಮಗು ಇಬ್ಬರೇ ಇರುವುದು.
ನಿನ್ನೆ ಅವಳು ಕೂಡ ಎಲ್ಲರೊಂದಿಗೆ ತಿರುಪತಿಗೆ ಹೋಗಿದ್ದಾಳೆ. ಒಟ್ಟಿನಲ್ಲಿ ಬೈಲುಮನೆಯ ಅನುರಾಧ, ಪೊಲ್ಲ, ರುಕ್ಕು ಎಲ್ಲಾ ನನ್ನ ಬಾಲ್ಯದ ಗೆಳೆಯರುಗಳು.ನಾವೆಲ್ಲ ಒಟ್ಟಿಗೆ ಆಡಿ ಬೆಳೆದವರು. ದೊಡ್ಡಪ್ಪನ ಮಕ್ಕಳಾದ ಮುರ್ಲಿ, ಇಂಪು ಎಲ್ಲಾ ಆಮೇಲೆ ನಮ್ಮ ವಠಾರಕ್ಕೆ ಬಂದದ್ದು.
ಪ್ರತಿಭಟನೆಗೆ ಬಾ ಎಂದು ಕರೆದಾಗ ಒಬ್ಬನೇ ಬರದೇ ಈಗ ರುಕ್ಕು ವನ್ನು ಕೂಡ ತನ್ನೊಡನೆ ಕರೆದುಕೊಂಡು ಬಂದಿರುವುದನ್ನು ನೋಡಿ....
ಪೊಲ್ಲ... ಇವಳನ್ನು ಯಾಕೆಯಾ ಕರೆದುಕೊಂಡು ಬಂದೆ...ಎಂದು ಅವನಲ್ಲಿಯೇ ಕೇಳಿದೆ.
ಅವಳಿಗೆ ಕೂಡ ನಿಮ್ಮ ಹೋರಾಟ ನೋಡಲು ತುಂಬಾ ಆಸೆ, ಮನೆಯಲ್ಲಿ ಕೂಡ ಬೇರೆ ಯಾರೂ ಇಲ್ಲ ಅಲ್ವಾ... ಒಬ್ಬಳಿಗೆ ಕೂತು ಕೂತು ಬೋರ್ ಆಗ್ತದೆ ಅಂತ,ಪ್ರತಿಭಟನೆಗೆ ನಾನು ಸ ಬರ್ತೆನೆ ಅಂತ ಅವಳೇ ಬಂದದ್ದು..
ಅಣ್ಣಾ.. ನಿಂಗೆ ನೆನಪು ಇಲ್ವಾ... ಅವಳು ಸ ಹಿಂದೆ ಹಳ್ಳಿಯ ಎಷ್ಟೋ ನಮ್ಮ ಪ್ರತಿಭಟನೆಗಳಲ್ಲಿ ಭಾಗಿ ಆಗಿ.. ಘೋಷಣೆ ಹಾಗೂ ಧಿಕ್ಕಾರ ಕೂಗಿದ್ದಾಳೆ.. ಹಾಗಾಗಿ ಮಹಿಳೆಯರನ್ನು ಮೋಟಿವ್ ಮಾಡ್ಲಿಕ್ಕೆ ಅವಳು ಸ ಒಳ್ಳೆಯ ಹೆಲ್ಪ್ ಆಗ್ತಾಳೆ.. ಇರ್ಲಿ ಬಿಡು.. ಉದ್ದಕ್ಕೆ ಹೇಳಿ ಮುಗಿಸಿದ ಪೊಲ್ಲ.
ಅವರಿಬ್ಬರ ಜಗುಲ್ ಬಂಧಿ ಜೋಡಿ ನನ್ನ ಜೊತೆ ಬರುವುದೆಂದರೆ ನನಗೆ ಸಿಕ್ಕಾಪಟ್ಟೆ ಭಯ ಕೂಡ ಆಗುತ್ತದೆ. ಏಕೆಂದರೆ ಪೊಲ್ಲ Over Enthusiastic fellow ಆದರೆ.. ಈ ರುಕ್ಕುವಿಗೆ ಹೇಳಿದ್ದು ಯಾವುದು ಪಕ್ಕನೇ ಅರ್ಥ ಆಗುವುದಿಲ್ಲ. ಒಬ್ಬನಿಗೆ ಒಂದು ಹೇಳಿದರೆ ಇನ್ನೊಂದು ಮಾಡುತ್ತಾನೆ... ಮತ್ತೊಬ್ಬಳಿಗೆ ಎಷ್ಟು ಹೇಳಿದರೂ ತಲೆಗೆ ಹೊಕ್ಕುವುದಿಲ್ಲ... ಹೇಳಿ ಹೇಳಿಯೇ ಸಾಕಾಗ್ತದೆ.
ಆದರೂ ಪೊಲ್ಲ ಹೇಳಿದಂತೆ ಹಿಂದೆ ಅವಳು ಕೂಡ ಕೆಲವೊಂದು ಪ್ರತಿಭಟನೆಗೆ ಬಂದು ಘೋಷಣೆ ಎಲ್ಲಾ ಕೂಗಿದ್ದು ನನಗೂ ನೆನಪಿದೆ.. ಆದರೆ ಈ ಅಕ್ಕ ತಮ್ಮ ಸೇರಿಕೊಂಡು ಏನೋ ಮಾಡಲು ಹೋಗಿ ಅದು ಬೇರೆ ಏನೋ ಎಡವಟ್ಟು ಆಗಿ ಕೊನೆಗೆ ನನ್ನ ಮಾನ ಹಾನಿ ಆಗಿದ್ದೇ ಜಾಸ್ತಿ.
ಅವಳಲ್ಲಿಯೇ ಸುಮ್ಮನೆ ಕೇಳಿದೆ..
ಮತ್ತೆ ರುಕ್ಕು... ಸ್ಲೋಗನ್ ಎಲ್ಲಾ ಬರ್ತದೆ ಅಲ್ವಾ.. ಅವರಿಗೆಲ್ಲ ನೀನೇ ಸರಿಯಾಗಿ ಹೇಳಿಕೊಡಬೇಕು ಮತ್ತೆ.. ಅಂದೆ.
ನನಗೆ ಅದೆಲ್ಲಾ ಈಗಲೂ ಬಾಯಿಪಾಠವೇ ಉಂಟು.. ಬೇಕಾದ್ರೆ ಇಲ್ಲೇ ಒಮ್ಮೆ ಘೋಷಣೆ ಕೂಗಿ ಬಿಡಲಾ... ರುಕ್ಕು ಉತ್ಸಾಹದಿಂದ ನನ್ನಲ್ಲಿಯೇ ಕೇಳಿದಳು..
ನೋಡುವ ಅಂತೆ..ಒಂದೆರಡು ಸ್ಲೋಗನ್ ಹೇಳು.. ಅಂದೆ.
ಅವಳು ಶುರು ಮಾಡಿದಳು..
" ಬೇಕೆ ಬೇಕು,
ನ್ಯಾಯ ಬೇಕು..
ಏತಕ್ಕಾಗಿ ಹೋರಾಟ,
ನ್ಯಾಯಕ್ಕಾಗಿ ಹೋರಾಟ...
ಎಲ್ಲಿಯವರೆಗೆ ಹೋರಾಟ,
ಗೆಲ್ಲುವವರೆಗೆ ಹೋರಾಟ...."
ಅವಳ ಘೋಷಣೆ ಏನೋ ಚೆನ್ನಾಗಿಯೇ ಇತ್ತು..
ಆದರೆ ಅವಳ ಆ ಸ್ವರ ಕೇಳಿ ಯಾವನೂ ಕೂಡ ಬೆಚ್ಚಿ ಬೀಳುವ ಹಾಗೆ ನನಗೆ ಕಾಣಲಿಲ್ಲ.
ಊಟ ಮಾಡಿಲ್ಲವಾ... ಕೇಳಿದೆ.
ಯಾಕೆ..? ಕೇಳಿದಳು.
ಮತ್ತೆ ಈ ತರಹ ಧಿಕ್ಕಾರ ಕೂಗಿದರೆ.. ನಮ್ಮ ಆಕ್ರೋಶದ ಕೂಗು ಅವರಿಗೆ ತಟ್ಟುವುದಾದರೂ ಹೇಗೆ..ಇನ್ನಷ್ಟು ಜೋರಾಗಿ ಭೂಮಿ ಅದುರುವಂತೆ ಕೂಗಬೇಕು ನೀನು.. ಅಂದೆ.
ಅದಕ್ಕೆ ಹೋರಾಟಗಾರರು, ಮಹಿಳೆಯರು ಎಲ್ಲ ಇದ್ದಾರೆ ಅಲ್ವಾ ಅಣ್ಣ.. ಇವಳು ಹೇಳಿಕೊಟ್ಟ ಹಾಗೆ ಅವರೆಲ್ಲರೂ ಸೇರಿ ಜೋರಾಗಿ ಕೂಗಿದರೆ ಆವಾಗ ಅದೇ ದೊಡ್ಡ ಬೊಬ್ಬೆ ಆಗುತ್ತದೆಯಲ್ವಾ... ಎಂದು ಹೇಳಿದ ಮಹಾ ಮೇಧಾವಿ ಪೊಲ್ಲ.
ಆಯಿತು ಮರ್ರೆ ಏನಾದರೂ ಒಂದು ಮಾಡಿ... ಮೊದಲು ಇಲ್ಲಿಂದ ಒಮ್ಮೆ ಹೊರಡುವ.. ಎಂದು ಹೇಳಿದೆ.
ಅಣ್ಣ... ಮಾರಾಕಾಯುಧ ಏನಾದರೂ ಹಿಡ್ಕೋಬೇಕಾ..? ಪೊಲ್ಲ ಕೇಳಿದ..
ಮಾರಾಕಾಯುಧವಾ..! ಯಾಕೆ...? ಕುತೂಹಲದಿಂದ ... ಕೇಳಿದೆ.
ರುಕ್ಕು ಹೇಳಿದಳು... ಮತ್ತೆ ಅಲ್ಲಿ ಕೇಡಿಗಳು ಬಂದು ನಮಗೆ ಅಟ್ಯಾಕ್ ಮಾಡಿದರೆ ನಮ್ಮ ಮಾನ,ಪ್ರಾಣ ರಕ್ಷಣೆಗೆ ಏನಾದರೂ ಬೇಕಾಗುತ್ತದೆ ಅಲ್ವಾ...?
ಆಹಾ... ಈ ಅಕ್ಕ ತಮ್ಮಂದಿರ ಯೋಚನೆ ಆಲೋಚನೆಗಳು ಯಾವತ್ತೂ ಬರೀ ಪೆಟ್ಟು ಲಡಾಯಿಯ ಬಗ್ಗೆಯೇ ಇರುತ್ತದೆ.ನನ್ನ ಜೊತೆ ಹೋಗುವುದು ಎಂದರೆ ಯಾವುದೋ ಒಂದು ದೊಡ್ಡ ಯುದ್ಧ ಮಾಡಲು ನಾವಿಬ್ಬರು ಹೋಗುತ್ತಿದ್ದೇವೆ ಎಂದೇ ಅವರು ಆಲೋಚಿಸುವುದನ್ನು ನೋಡುವುದೇ ನನಗೆ ಕೆಲವೊಮ್ಮೆ ಇನ್ನಿಲ್ಲದಂತೆ ಭಯ ತರಿಸುತ್ತದೆ. ಆದರೂ ಏನೂ ಮಾಡಲು ಸಾಧ್ಯವಿಲ್ಲ.. ಏಕೆಂದರೆ ಊರಲ್ಲಿ ಅವರಿಬ್ಬರ ದೊಡ್ಡ ರೋಲ್ ಮಾಡೆಲ್ ಹಾಗೂ ಅವರ ಪಾಲಿನ ಅತೀ ದೊಡ್ಡ ಸಾಹಸಿ ಅಂದರೆ ಅದು ನಾನೇ.
ಪೊಲ್ಲನಲ್ಲಿಯೇ ಕೇಳಿದೆ...
ಪೊಲ್ಲ... ಅಂತಹ ಯಾವ ಮಾರಾಕಾಯುಧ ಉಂಟಾ ನಿನ್ನಲ್ಲಿ ?
ಬ್ಯಾಟ್ ಉಂಟು... ವಿಕೆಟ್ ಉಂಟು.... ಅಷ್ಟು ಸಾಕಲ್ಲ.. ಅಂದ ಪೊಲ್ಲ.
ಇವನು ಫಿಲಂ ಎಲ್ಲಾ ನೋಡಿ ಬ್ಯಾಟು,ವಿಕೇಟ್ ಇರುವುದೇ ಪೆಟ್ಟು ಲಡಾಯಿ ಮಾಡಲು ಎಂದು ಪಿಕ್ಸ್ ಆಗಿರುವುದನ್ನು ಕಂಡು ನನಗೆ ಕ್ರಿಕೆಟ್ ಆಟದ ಬಗ್ಗೆಯೇ ಒಮ್ಮೆ ಸಿಕ್ಕಾಪಟ್ಟೆ ಜಿಗುಪ್ಸೆ ಬಂದು ಹೋಯಿತು.
ನಾನಿರುವಾಗ ಆ ತರಹ ಏನೂ ಆಗಲ್ಲ.. ಹೊತ್ತಾಯಿತು.. ಹೋಗುವ... ಅಂದೆ.
ನಾನು ಮತ್ತು ಭಾಮ ಬುಲ್ಲೆಟ್ ನಲ್ಲಿ... ಪೊಲ್ಲ ಮತ್ತು ರುಕ್ಕು ಸ್ಕೂಟಿಯಿಲ್ಲಿ ನಮ್ಮ ಪುಲ್ಕಿಯ ಪಂಚಾಯಿತಿ ಕಡೆಗೆ ವೇಗವಾಗಿ ಹೊರಟೆವು.
ಬೈಕ್ ನಲ್ಲಿ ಹೋಗುತ್ತಿರುವಾಗಲೂ ನಡು ನಡುವೆ ನಮ್ಮ ದಾಮಣ್ಣನ ಪೋನ್ ಕಾಲ್ ಬರುತ್ತಲೇ ಇತ್ತು... ಎಲ್ಲಿ ಇದ್ದೀಯಾ.. ಎಂದು.
ಜಸ್ಟ್ ಐದು ನಿಮಿಷದಲ್ಲಿ ಬರ್ತೇನೆ... ಪ್ರತಿಭಟನೆಗೆ ಎಲ್ಲಾ ರೆಡಿ ಉಂಟಲ್ಲಾ... ನಮ್ಮ ಮಹಿಳೆಯರು ನಾನು ಹೇಳಿದಂತೆಯೇ ದೊಡ್ಡ ದೊಡ್ಡ ಕೊಡಪಾನ ಎಲ್ಲಾ ತಂದಿದ್ದಾರೆ ಅಲ್ಲಾ... ದಾಮಣ್ಣನಲ್ಲಿಯೇ ಕೇಳಿದೆ.
ಎಲ್ಲರೂ ಕೊಡಪಾನ ಸಹಿತವಾಗಿಯೇ ನನಗಿಂತಲೇ ಮುಂಚೆ ಬಂದು ಕುಳಿತುಕೊಂಡಿದ್ದಾರೆ ಮಾರಾಯ ..ನೀನು ಒಮ್ಮೆ ಬೇಗ ಬಾ.. ಎಂದು ದಾಮಣ್ಣ ಹೇಳಿ ಮುಗಿಸಿದ್ದರು.
ಅಂತು ಇಂತು ನಾವು ನಾಲ್ವರು ಪಂಚಾಯಿತಿ ಆವರಣ ತಲುಪಿ ಆಯಿತು.ದೊಡ್ಡಪ್ಪನ ಮಕ್ಕಳು ಮುರ್ಲಿ, ಇಂಪು ಇದ್ದಿದ್ದರೆ ಅವರೂ ಕೂಡ ಬರುತ್ತಿದ್ದರು.ಅವರೇ ಇವತ್ತು ನಮ್ಮ ದೋಸ್ತಿ ಗ್ಯಾಂಗ್ ಅಲ್ಲಿ ಮೈನ್ ಆಗಿ ಮಿಸ್ ಆಗಿದ್ದು.
ಪಂಚಾಯಿತಿ ಆವರಣವನ್ನೊಮ್ಮೆ ನೋಡಿದೆ.
ನಿಜವಾಗಿಯೂ ಎಲ್ಲಾ ಮಹಿಳೆಯರು ಬಹಳ ಶಿಸ್ತಿನಿಂದ ಪ್ಲಾಸ್ಟಿಕ್ ಕೊಡಪಾನಗಳನ್ನು ತೆಗೆದುಕೊಂಡು ಬಂದು ಒಂದು ಕಡೆ ಮರದಡಿಯಲ್ಲಿ ಪಂಚಾಯಿತಿ ಎದುರಲ್ಲಿಯೇ ಕುಳಿತುಕೊಂಡು, ಏನೋ ಅವರವರಲ್ಲಿಯೇ ಪಂಚಾಯಿತಿ ಕಥೆ ಮಾಡುತ್ತಿದ್ದರು.
ಅವರಲ್ಲಿ ಅಂತಹ ಬಡವರು ಯಾರೂ ಇಲ್ಲ. ಎಲ್ಲರೂ ನಮ್ಮ ಹಾಗೆಯೇ ಇರುವವರು..ಹೋರಾಟ ಅಂತ ಬಂದಾಗ ಎಲ್ಲರೂ ಕೈ ಜೋಡಿಸುತ್ತಿದ್ದರು ಅಷ್ಟೇ.
ಪಂಚಾಯಿತಿ ಇನ್ನೂ ಓಪನ್ ಆಗಿರಲಿಲ್ಲ.ಬಹುಶಃ ಮೆಂಬರ್ ಗಳು,ಅಧ್ಯಕ್ಷರು ಇನ್ನೂ ಬಂದಿರಲಿಲ್ಲ ಎಂದು ಕಾಣುತ್ತದೆ.
ಬೈಕ್ ನಿಲ್ಲಿಸಿದ ಕೂಡಲೇ ದಾಮಣ್ಣ ನಾವು ಇದ್ದಲ್ಲಿಗೆಯೇ ಓಡೋಡಿ ಬಂದರು.
ಎಲ್ಲಿ ನೀಲು ನೀನು... ನೀನೊಂದು ಯಾವಾಗಲೂ ಲೇಟೇ ಮಾರಾಯ ... ನೋಡು ಮೊದಲು ಈ ಬ್ಯಾನರ್ ಒಂದನ್ನು ಎಲ್ಲಾದರೂ ಕಟ್ಟಿಸುವ ವ್ಯವಸ್ಥೆ ಮಾಡು... ಎಂದು ಪ್ರತಿಭಟನೆಯ ಬ್ಯಾನರ್ ಅನ್ನು ನನ್ನ ಕೈಗಿತ್ತರು.
"ನೀರಿಗಾಗಿ ಪ್ರಾಣ ಕೊಡುವೆವು.." ಪುಲ್ಕಿ ಮಹಿಳೆಯರಿಂದ ನೀರಿಗಾಗಿ ಉಗ್ರ ಪ್ರತಿಭಟನೆ... ಎಂದು ಇಂದಿನ ದಿನಾಂಕ ಹಾಕಿ ಅದರಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದಿತ್ತು.
ನನ್ನ ಕೈಯಲ್ಲಿದ್ದ ಬ್ಯಾನರ್ ಅನ್ನು ನೋಡಿ ರುಕ್ಕು ಹೇಳಿದಳು.. ಅದನ್ನು ನಾವು ಕಟ್ಟುತ್ತೇವೆ..ಇಲ್ಲಿ ಕೊಡಿ.. ಎಂದು ನನ್ನಿಂದ ಬ್ಯಾನರ್ ತೆಗೆದುಕೊಂಡು ಭಾಮಳನ್ನು ಜೊತೆಯಲ್ಲಿಯೇ ಕರೆದುಕೊಂಡು ಅಲ್ಲೇ ಒಂದು ಕಡೆ ಮರದ ಗೆಲ್ಲಿಗೆ ಆ ಬ್ಯಾನರ್ ಕಟ್ಟಲು ಇಬ್ಬರೂ ಹೋದರು. ಅವರಿಬ್ಬರಂತು ಈಗ ಬಾರೀ ದೊಡ್ಡ ದೋಸ್ತಿಗಳು ಆದಂತಿದೆ. ಒಬ್ಬಳು ಏನು ಮಾತಾಡುತ್ತಾಳೋ ಅದು ಅವಳಿಗೆಯೇ ಗೊತ್ತಿಲ್ಲ, ಮತ್ತೊಬ್ಬಳು ಅಳೆದು ತೂಗಿ ಒಂದು ಸಾಲಿನಲ್ಲಿ ಅಷ್ಟೇ ಉತ್ತರಿಸುತ್ತಾಳೆ. ಆಹಾ.. ಭಯಂಕರ ಜನುಮ ಜನುಮದ ಗೆಳತಿಯರು. ಮನಸ್ಸಿನಲ್ಲಿಯೇ ಅಂದಕೊಂಡೆ.
ನನಗೆ ಅಲ್ಲೇ ಕೊಡಪಾನದೊಂದಿಗೆ ಕುಳಿತಿದ್ದ ಮಹಿಳೆಯರನ್ನು ಸ್ವಲ್ಪ ಹುರಿದುಂಬಿಸುವ ಎಂದು ಮನಸ್ಸಾಯಿತು.
ನೇರಾ ಅವರ ಬಳಿಗೆ ನಡೆದೆ. ನನ್ನ ಜೊತೆಗೆ ದಾಮಣ್ಣ ಕೂಡ ಬಂದರು. ನನ್ನ ಹಿಂದೆ ಹಿಂದೆ ಪೊಲ್ಲ ಕೂಡ ಬಂದ ಒಳ್ಳೆಯ ಸಿನ್ಸಿಯರ್ ಅಸಿಸ್ಟೆಂಟ್ ತರಹ.
ನನಗೆ ಅಲ್ಲಿರುವ ಹೆಚ್ಚಿನ ಊರಿನ ಮಹಿಳೆಯರು ತುಂಬಾನೇ ಪರಿಚಯವೇ.ನಾವೆಲ್ಲರೂ ಎಷ್ಟೋ ಉಗ್ರ ಹೋರಾಟಗಳಲ್ಲಿ ಜೊತೆಯಾಗಿ ಭಾಗಿ ಆಗಿದ್ದವರು.
ಹಾಗಾಗಿ ಅವರೆಲ್ಲರಿಗೂ ನಮ್ಮ ಈ ದಿನದ ಪ್ರತಿಭಟನೆ ಹೇಗಿರಬೇಕು.. ನಮ್ಮ ಬೇಡಿಕೆಗಳು ಏನು.. ನಮಗೆ ಆಗುತ್ತಿರುವ ಕಷ್ಟದ ಬಗ್ಗೆ.. ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿದೆ.
ನಾನು ಹೇಳಿದ ಎಲ್ಲವನ್ನೂ ಕೇಳಿಸಿಕೊಂಡ ನಂತರ ಲೀಲಕ್ಕ ಹೇಳಿದರು.. ಪಂಚಾಯಿತಿವರು ಇನ್ನೂ ಬಂದಿಲ್ಲ. ಹತ್ತು ಗಂಟೆ ಬೇರೆ ಆಯಿತು.. ಯಾಕೆ ನಾವು ತಿಂಡಿ ತಿಂದೇ ಹೋರಾಟ ಶುರು ಮಾಡಬಾರದು ನೀಲು..
ಅಹಾ.. ಎಂತಹ ಒಂದು ಜಾಣ್ಮೆ.. ಎಂದು ಒಮ್ಮೆ ಅನಿಸಿತು.
ವನಜಕ್ಕ, ಪ್ರಮಿಳಕ್ಕ,ಕುಸುಮಕ್ಕ ಹೀಗೆ ಎಲ್ಲರೂ ಒಕ್ಕೊರಲಿನಿಂದ ಮೊದಲು ತಿಂಡಿಯೇ ಆಗಲಿ.. ಆಮೇಲೆ ಹೇಗೋ ನಾವು ಉಗ್ರ ಹೋರಾಟ ಮಾಡಲೇ ಬೇಕಲ್ಲ.. ಎಂದು ತಮ್ಮ ಅಭಿಪ್ರಾಯ ಕೂಡ ಮಂಡಿಸಿದರು. ಅಲ್ಲಿ ಸೇರಿದ್ದ ಹತ್ತಿಪ್ಪತ್ತು ಮಹಿಳೆಯರ ಅಭಿಪ್ರಾಯವೂ ಕೂಡ ಅದೇ ಆಗಿತ್ತು. ಯಾರಲ್ಲೂ ಕೂಡ ಭಿನ್ನ ಅಭಿಪ್ರಾಯವೇ ಇರಲಿಲ್ಲ. ಆಹಾ... ಎಂತಹ ಒಗ್ಗಟ್ಟು.. ಎಂತಹ ಸಮಾನ ಮನಸ್ಕರು.. ಎಂತಹ ಉಗ್ರ ಹೋರಾಟದ ಮುನ್ಸೂಚನೆ.. ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ನನಗಂತು ಯಾಕೋ ಇವರು ಪ್ರತಿಭಟನೆಗಿಂತ... ಫಳಾರ ಸೇವನೆಗೆ ಬಂದಿರುವಂತೆ ಕಂಡಿತು.
ಇರಲಿ.. ಇರಲಿ... ತಿಂಡಿ ಸೇವನೆಯೂ ಕೂಡ ಹೋರಾಟದ ಒಂದು ಮುಖ್ಯ ಅಂಗ.. ಅದನ್ನು ಕೂಡ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ...ಎಂದು ನಮ್ಮ ಊರಿನ ನಿಜವಾದ ಬಡವರ ಬಂದು, ಕೊಡುಗೈ ದಾನಿ ದಾಮಣ್ಣನತ್ತ ಮೆಲ್ಲನೆ ನೋಡಿದೆ. ಏಕೆಂದರೆ ನಮ್ಮ ಎಲ್ಲಾ ಹೋರಾಟಕ್ಕೆ ಅತೀ ದೊಡ್ಡ ಸ್ಪಾನ್ಸರ್ ಅಂದರೆ ಅದು ಅವರೇ.. ಅವರನ್ನು ನಂಬಿಯೇ ಊರಿನಲ್ಲಿ ನಾವೆಲ್ಲರೂ ಹೋರಾಟಕ್ಕೆ ಇಳಿಯುವುದು.
ದಾಮಣ್ಣನಿಗೆ ವಿಷಯ ಅರ್ಥ ಆಯಿತು.ಅವರಿಗೆ ಜಾಸ್ತಿ ಹೇಳಬೇಕಾಗಿಲ್ಲ..
ತಮ್ಮ ಪರ್ಸಿನಿಂದ ಒಂದಷ್ಟು ನೋಟುಗಳನ್ನು ತೆಗೆದು ನನ್ನ ಶರ್ಟಿನ ಜೇಬಿಗೆ ತುರುಕಿ ಬಿಟ್ಟರು.
ನಾನು ಅಲ್ಲೇ ಇದ್ದ ಪೊಲ್ಲನನ್ನು ಕರೆದು ಮಾಬಲಣ್ಣನ ಹೋಟೆಲ್ ನಿಂದ ಗೋಳಿಬಜೆ, ಚಹಾ ತಾ.. ಎಂದು ಅವನ ಕೈಗೆ ದಾಮಣ್ಣ ನನಗಿತ್ತ ಕೆಲವು ನೋಟುಗಳಲ್ಲಿ ಒಂದೆರಡು ದೊಡ್ಡ ನೋಟು ಅನ್ನು ಉಳಿಸಿಕೊಂಡು .. ಅಷ್ಟು ಜನಕ್ಕೆ ಎಷ್ಟು ಆಗಬಹುದು ಎಂಬ ಖರ್ಚಿನ ಲೆಕ್ಕವನ್ನು ಮನಸ್ಸಿನಲ್ಲಿಯೇ ಹಾಕಿ.. ಎಷ್ಟು ಬೇಕೋ ಅಷ್ಟೇ ಹಣವನ್ನು ಅವನ ಕೈಗಿತ್ತೆ.
ಅವನಿಗೆ ಈ ತರಹ ಎಲ್ಲಾ ಕಳುಹಿಸಿದರೆ ಬಾರೀ Jolly ಯಿಂದ ಹೋಗಿ ಬರ್ತಾನೆ,ಮಾತ್ರವಲ್ಲ ನಮ್ಮ ಹೋರಾಟಗಳಲ್ಲಿ ಈ ತರಹದ ಫುಡ್ ಜವಾಬ್ದಾರಿ ಎಲ್ಲಾ ಅವನೇ ಯಾವಾಗಲೂ ವಹಿಸಿಕೊಳ್ಳುವುದು.
ಅವನು ತನ್ನ ಹಳೆಯ ಸ್ಕೂಟಿ ಹಿಡಿದುಕೊಂಡು ಮಾಬಲಣ್ಣನ ಹೋಟೆಲ್ ಕಡೆಗೆ ರೊಂಯ್ಯ್ ಎಂದು ಹೋದ.
ಹೋಟೆಲ್ ನಲ್ಲಿ ಗೋಳಿಬಜೆ ಖಾಲಿ ಆಗಿತ್ತಂತೆ. ಹಾಗಾಗಿ ಸಜ್ಜಿಗೆ ಬಜಿಲ್(ಉಪ್ಪಿಟ್ಟು ಮತ್ತು ಅವಲಕ್ಕಿ) ಹಾಗೂ ಚಹಾ ತಂದ.
ಎಲ್ಲರೂ ಕುಳಿತುಕೊಂಡು ಸಜ್ಜಿಗೆ ಬಜಿಲ್ ಅನ್ನು ಖಾಲಿ ಮಾಡಿ ಬಿಸಿ ಚಹಾ ಕೂಡ ಹೀರಿದೆವು.
ರುಕ್ಕು ಉತ್ಸಾಹದಿಂದ ಹೇಳಿದಳು... ಇನ್ನು ನಾವು ಹೋರಾಟ ಶುರು ಮಾಡುವುದಾ...?
ಮಾಡಿ...ಮಾಡಿ...ಇನ್ನು ಪಂಚಾಯಿತಿಯವರು ನಮ್ಮ ಮಾತಿಗೆ ಮಣಿಯುವವರೆಗೆ ಹೋರಾಟವೇ... ಎಂದು ಹೇಳಿದೆ.
ನಂತರ ಅವಳು ಅವರೆಲ್ಲರಿಗೂ ನಾನು ಹೀಗೆ ಹೇಳುತ್ತೇನೆ... ನೀವು ಸ ಹೀಗೆ ಹೇಳಬೇಕು.. ಎಂದು ಹೇಳಿ ಸ್ಲೋಗನ್ ಕೂಗಲು ಶುರು ಮಾಡಿದಲು..
" ಬೇಕೆ ಬೇಕು,
ನ್ಯಾಯ ಬೇಕು..
ಏನೇ ಬರಲಿ,
ಒಗ್ಗಟ್ಟಿರಲಿ..
ಏತಕ್ಕಾಗಿ ಹೋರಾಟ,
ನ್ಯಾಯಕ್ಕಾಗಿ ಹೋರಾಟ...
ಎಲ್ಲಿಯವರೆಗೆ ಹೋರಾಟ,
ಗೆಲ್ಲುವವರೆಗೆ ಹೋರಾಟ.. "
ರುಕ್ಕುವಿನ ಘೋಷಣೆಗೆ ಮಹಿಳಾ ಹೋರಾಟಗಾರರು ಸಹ ಪ್ರತಿ ಘೋಷಣೆ ಕೂಗಿದರು.
ಈಗಷ್ಟೇ ಸಜ್ಜಿಗೆ ಬಜಿಲ್ ತಿಂದಿದ್ದರೂ ಸಹ ಅವರ ಘೋಷಣೆಯಲ್ಲಿ ಯಾವುದೇ ಅಂತಹ ಜೋಶ್ ನನಗೆ ಕಾಣಿಸಲಿಲ್ಲ.
ಬದಲಿಗೆ ರುಕ್ಕುವೇ ಅವಳಷ್ಟಕ್ಕೆ... "ಏತಕ್ಕಾಗಿ ಹೋರಾಟ..." ಎಂದು ಜೋರಾಗಿ ಕಿರುಚುತಿದ್ದಳು.
ಕೊನೆಗೆ ಭಾಮನಿಗೆ ನೋಡಿ ನೋಡಿ ಸಾಕಾಗಿ ಅವಳು ಕೂಡ ರುಕ್ಕುವಿನ ಘೋಷಣೆಗೆ ಧ್ವನಿಗೂಡಿಸಿದಳು.
ಎಷ್ಟು ಹೊತ್ತಾದರೂ ನಮ್ಮ ಪಂಚಾಯಿತಿಯವರು ಬರುವ ಹಾಗೆ ಕಾಣಲಿಲ್ಲ.
ಆಗ ಐಸ್ಕ್ಯಾಂಡಿ ಯವನು ತನ್ನ ಸೈಕಲ್ ನಲ್ಲಿ ಅಲ್ಲಿಗೆ ಬಂದು ತನಗೆ ಏನಾದರೂ ವ್ಯಾಪಾರ ಆಗಬಹುದೆಂದು ಅಲ್ಲೇ ಸೈಕಲ್ ಘಂಟೆ ಹೊಡೆಯುತ್ತಾ ನಿಂತುಕೊಂಡು ಬಿಟ್ಟ.
ಅದನ್ನು ನೋಡಿ ಪೊಲ್ಲ ಹೇಲಿದ... ನೀಲು ಅಣ್ಣ... ಯಾಕೆ ನಾವು ಈ ಬಿಸಿಲಿಗೆ ಐಸ್ ಕ್ಯಾಂಡಿ ತಿಂದು ಬಾಯಿ ತಂಪು ಮಾಡಬಾರದು. ರುಕ್ಕು ಅಕ್ಕ.. ಭಾಮ ಅಕ್ಕ ಬೇರೆ ಇಬ್ಬರೇ ಆಗದಿಂದ ಜೋರಾಗಿ ಘೋಷಣೆಗಳನ್ನು ಕಿರುಚುತ್ತಿದ್ದಾರೆ...ಎಂದು ಹೇಳಿದ.
ಅವನು ಹೇಳಿದ್ದು ಕೂಡ ಸರಿಯೇ... ರುಕ್ಕು, ಭಾಮ... ಘೋಷಣೆಗಳನ್ನು ಕೂಗುವ ಬದಲು,ಕಿರುಚುವಂತೆಯೇ ನನಗೂ ಭಾಸವಾಯಿತು. ಅದರಲ್ಲೂ ರುಕ್ಕು ಮಾತ್ರ ಇದನ್ನು ಬಹಳನೇ ಸಿರಿಯಸ್ ಆಗಿ ತೆಗೆದುಕೊಂಡು ಅವಳಿಂದ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಸ್ಲೋಗನ್ ಕೂಗುತ್ತಿದ್ದಳು.
ಈಗ ಅವರಿಬ್ಬರಿಗೆ ಮಾತ್ರ ಐಸ್ ಕ್ಯಾಂಡಿ ತೆಗೆದುಕೊಟ್ಟು ನಮ್ಮ ಉಗ್ರ ಹೋರಾಟಗಾರರಿಗೆ ಐಸ್ಕ್ಯಾಂಡಿ ತೆಗೆದುಕೊಡದಿದ್ದರೆ ತಪ್ಪಾಗುತ್ತದೆ.
ನನ್ನ ಮನದ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡ ವನಜಕ್ಕ ಹೇಳಿದರು... ನೋಡ ನೀಲು.. ಆ ಪಾಪ ಐಸ್ಕ್ಯಾಂಡಿ ಯವನಿಗೆ ಸ್ವಲ್ಪ ವ್ಯಾಪಾರ ಮಾಡ... ನಮಗೆ ಸ ಈ ಬಿಸಿಲಿಗೆ ತಂಪಾದದ್ದು ಏನಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.. ಪಾಪ.. ಅವನಿಗೊಂದು ವ್ಯಾಪಾರ ಕೂಡ ಆಗ್ತಿತ್ತು.. ಅಂತ ಹೇಳಿದರು.
ಅವರ ಮಾತು ಮುಗಿಯುವುದರೊಳಗೆ ಲೀಲಕ್ಕ, ಪ್ರಮಿಳಕ್ಕ, ಕುಸುಮಕ್ಕ ಎಲ್ಲರೂ.. ಹೌದಾ.. ಅವನಿಗೊಂದು ವ್ಯಾಪಾರ ಮಾಡ ನೀಲು... ಅಂತ ಒಕ್ಕೊರಲಿನಿಂದ ತಮ್ಮ ಅಭಿಪ್ರಾಯ ಮಂಡನೆ ಮಾಡಿದರು.
ಆಹಾ... ತಮಗೆ ಬೇಕೇ ಬೇಕು ಎಂದು ಹೇಳುವ ಬದಲು, ಅವನಿಗೊಂದು ವ್ಯಾಪಾರ ಮಾಡು ಎಂಬ ಇವರ ಬೇಡಿಕೆಯೇ ತುಂಬಾನೇ ವಿಶಿಷ್ಟವಾಗಿತ್ತು.. ಎಂತಹ ಒಗ್ಗಟ್ಟು..ಎಂತಹ ಒಗ್ಗಟ್ಟು..
ದಾಮಣ್ಣ ಚಹಾ ತಿಂಡಿಗೆ ಅಂತ ಕೊಟ್ಟ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿತ್ತು. ಹಾಗಾಗಿ ಈ ಬಾರಿ ದಾಮಣ್ಣನತ್ತ ನೋಡಲಿಲ್ಲ.
ಪೊಲ್ಲನಿಗೆ ಐಸ್ಕ್ಯಾಂಡಿ ತರಲು ಹಣ ಕೊಟ್ಟೆ.
ಕೊನೆಗೆ ಎಲ್ಲರಿಗೂ ಐಸ್ಕ್ಯಾಂಡಿ ಸೇವೆ ಕೂಡ ಆಯಿತು.
ಉಗ್ರ ಹೋರಾಟ ಮತ್ತೆ ಮುಂದುವರಿಯಿತು..
ಇನ್ನೂ ಪಂಚಾಯಿತಿಯವರು ಬರುವ ಲಕ್ಷಣ ಕಾಣುತ್ತಿಲ್ಲ.
ಹಾಗಾಗಿ ಅವರು ಬರುವವರೆಗೂ ನಮ್ಮ ಈ ಪ್ರತಿಭಟನೆ ನಿಲ್ಲಿಸುವಂತಿಲ್ಲ.
ಅದು ಅಲ್ಲದೇ ದಾಮಣ್ಣ ಪ್ರೆಸ್ ನವರಗೆ ಕೂಡ ಹಿಂದಿನ ದಿನವೇ ನಮ್ಮ ಉಗ್ರ ಪ್ರತಿಭಟನೆಯ ವಿಷಯ ತಿಳಿಸಿದ್ದರಿಂದ ಅವರೂ ಕೂಡ ಇನ್ನು ಕೆಲವೇ ಕ್ಷಣಗಳಲ್ಲಿ ಬರಬಹುದು. ಹಾಗಾಗಿ ವಿಧಿ ಇಲ್ಲದೇ ಆ ಬಿಸಿಲಲ್ಲಿ ಕೂಡ ನಮ್ಮ ಪ್ರತಿಭಟನೆ ಮುಂದುವರಿಯಿತು.
ರುಕ್ಕು ಒಬ್ಬಳೇ ಸೀರಿಯಸ್ ಆಗಿ ಕೂಗುತ್ತಿದ್ದಳು.
"ಏನೇ ಬರಲಿ...
ಒಗ್ಗಟಿರಲಿ..."
ನಿಜವಾಗಿಯೂ ನಮ್ಮ ಮಹಿಳೆಯರಲ್ಲಿ ತುಂಬಾನೇ ಒಗ್ಗಟಿರುವುದನ್ನು ನನಗೂ ಕೆಲವೇ ಕ್ಷಣಗಳ ಹಿಂದೆ ಸಿಕ್ಕಾಪಟ್ಟೆ ಅನುಭವಕ್ಕೆ ಬಂದಿತ್ತು.
ಕೊನೆಗೆ ಮಧ್ಯಾಹ್ನದ ಕೂಡ ಆಯಿತು.
ಊಟದ ಸಮಯ.
ಪ್ರಮಿಳಕ್ಕ ಹೇಳಿದರು... ನೀಲು, ಪಂಚಾಯಿತಿಯವರು ಬಹುಶಃ ಊಟ ಮಾಡಿಯೇ ಬರುತ್ತಾರೆ ಎಂದು ಕಾಣುತ್ತದೆ. ನಾವು ಕೂಡ ಏಕೆ ಊಟ ಮಾಡಿ, ಸ್ವಲ್ಪ ರೆಸ್ಟ್ ಮಾಡಿ.. ಆಮೇಲೆ ಹೋರಾಟ.. ಮುಂದುವರಿಸಬಾರದು.
ಆ ಮಾತಿಗೆ ಲೀಲಕ್ಕ, ವನಜಕ್ಕ ಹಾಗೂ ಕುಸುಮಕ್ಕ ಕೂಡ ಧ್ವನಿಗೂಡಿಸುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಊಟ ಮಾಡಿ... ಸ್ವಲ್ಪ ರೆಸ್ಟ್!... ನನಗೆ ಯಾಕೋ ಇವರು ಹೋರಾಟಗಾರರಿಗಿಂತಲೂ ಹೆಚ್ಚಾಗಿ ಗದ್ದೆ ಕೆಲಸ ಮಾಡುವವರಂತೆ,ಬಂಡೆ ಒಡೆಯುವವರಂತೆ,ಕಲ್ಲಿನ ಕೋರೆಯ ಕೆಲಸಗಾರರಂತೆ ಕಂಡರು.
ಮೀನು ಊಟವೇ ಇರಲಿ ಅಲ್ವಾ.... ಎಂದು ನಾನೇ ಅವರಲ್ಲಿ ಕೇಳಿದೆ.
ಮೀನು ಊಟ ಆದರೂ ಓಕೆ... ಚಿಕನ್ ಊಟ ಆದರು ಓಕೆ...ಆದರೆ ಬೂತಾಯಿ ಪ್ರೈ ಒಂದು ಇರ್ಲಿ ನೀಲು... ಅಂತ ಹೇಳಿದರು ಕುಸುಮಕ್ಕ.
ನಾನು ದಾಮಣ್ಣನ ಮುಖ ನೋಡಿದೆ.
ಅವರು ಏನೂ ಹೇಳದೆ ಒಂದಷ್ಟು ನೋಟಗಳನ್ನು ನನ್ನತ್ತ ತಳ್ಳಿದ್ದರು.
ನಾನು ಪೊಲ್ಲನಿಗೆ ಹೇಳಿದೆ... ಪೊಲ್ಲ,ಮಾಬಲಣ್ಣನ ಹೋಟೆಲ್ ಗೆ ಹೋಗಿ ಫಿಶ್ ಊಟ ತಾ... ಒಂದೊಂದು ಬೂತಾಯಿ ಫ್ರೈ ಕೂಡ ಇರಲಿ... ಹಾಗೆಯೇ ಮಾಬಲಣ್ಣನಿಗೆ ನಮ್ಮ ಸಂಜೆಯ ಹೋರಾಟಕ್ಕೆ ಪೋಡಿ ಗೀಡಿ ಏನಾದರೂ ಮಾಡಿ ಇಡ್ಲಿಕ್ಕೆ ಹೇಳು... ಎಂದು ಹೇಳಿ ಅವನಿಗೆ ಹಣ ಕೊಟ್ಟೆ.
ನನಗೂ ಇದೇ ರೀತಿ ಮುಂದುವರಿದರೆ ನಮ್ಮ ಉಗ್ರ ಹೋರಾಟ ಸಂಜೆಯವರಗೆ ಖಂಡಿತವಾಗಿಯೂ ಮುಂದುವರಿಯುತ್ತದೆ ಎಂದು ಗೊತ್ತಿತ್ತು. ಪುನಃ ನಮ್ಮ ಹೋರಾಟಗಾರರೇ ಸಂಜೆಯ ಕಾಫಿ ತಿಂಡಿಯನ್ನು ನೆನಪಿಸುವುದು ಬೇಡ ಎಂದು ನಾನೇ ಈಗಲೇ ಮಾಬಲಣ್ಣನಿಗೆ ರೆಡಿ ಮಾಡಿ ಇಡ್ಲಿಕ್ಕೆ ಹೇಳು ಎಂದು ಪೊಲ್ಲನ ಬಳಿ ಹೇಳಿದ್ದು.
ಪೊಲ್ಲ ಹೋಗಿ ಊಟ ತಂದ.
ಊಟವೂ ಆಯಿತು.
ಈಗ ಉಗ್ರ ಹೋರಾಟದಲ್ಲಿ ಒಂದು ಗಂಟೆ ರೆಸ್ಟಿನ ಸಮಯ.
ಅವರು ಮಹಿಳೆಯರೇ ಏನೇನೋ ಮನೆಯ ಅಧಿಕಪ್ರಸಂಗ ಎಲ್ಲಾ ಮಾತಾಡಲು ಶುರು ಮಾಡಿಕೊಂಡರು.
ಅಲ್ಲೇ ಇದ್ದ ನನಗೂ ಎಲ್ಲವೂ ಸ್ಪಷ್ಟವಾಗಿ ಕೇಳುತ್ತಿತ್ತು.
ಅವರ ಮಾತಿನ ಮಧ್ಯೆ ಧಾರಾವಾಹಿಗಳ ವಿಷಯ ಕೂಡ ಬಂತು.
ಲೀಲಕ್ಕ ಹೇಳಿದರು...ನಮ್ಮ ಮುದ್ದು ಲಕ್ಷ್ಮಿಗೆ ಯಾವಗಲೂ ಕಷ್ಟವೇ ಪಾಪ... ಅವಳ ಗಂಡ ಸರಿ ಇಲ್ಲ.
ವನಜಕ್ಕ ಹೇಳಿದರು - ಸರಸುನ ಕಷ್ಟ ಕೂಡ ಕಮ್ಮಿ ಏನಲ್ಲ.ಅವಳ ತಂದೆ ಸರಿ ಇಲ್ಲ.
ಪ್ರಮೀಳಕ್ಕ ಹೇಳಿದರು - ನಮ್ಮ ಆಶಾ ಕೂಡ ಒಬ್ಬಳೇ ಅಂತ ಎಷ್ಟು ಹೋರಾಟ ಮಾಡುವುದು..
ಅದನ್ನೆಲ್ಲ ಕೇಳಿ ನನಗನಿಸಿತು...ಅವರೆದ್ದೆಲ್ಲಾ ಹೋರಾಟವೇ.. ಎಲ್ಲರಿಗೂ ಕಷ್ಟವೇ... ಆದರೆ ಇವರಿಗೆ ಯಾಕೆ ನಾವು ಕೂಡ ಒಂದು ಹೋರಾಟಕ್ಕೆಯೇ ಬಂದಿದ್ದೆವೆ ಎಂಬ ಸೀರಿಯಸ್ ನೆಸ್ ಒಂಚೂರು ಇಲ್ಲ.
ನನ್ನ ಬಳಿಯೇ ಇದ್ದ ರುಕ್ಕುವನ್ನು ನೋಡಿ ಕುಸುಮಕ್ಕ ಹೇಳಿದರು.... ರುಕ್ಕು, ನಿನ್ನ ಹೆಸರಲ್ಲೇ ಒಂದು ಸೀರಿಯಲ್ ಇದೆ ಗೊತ್ತುಂಟಾ, ಬಾರೀ ಒಳ್ಳೆಯದುಂಟು... ನೀನು ನೋಡಲ್ವಾ..
ಅದಕ್ಕೆ ರುಕ್ಕು.... ನಾನು ಸ ನೋಡ್ತೇನೆ,ತುಂಬಾ ಚೆನ್ನಾಗಿದೆ ...ಮನೆಯಲ್ಲಿ ಅಮ್ಮ ಸ ನೋಡ್ತಾರೆ.. ಎಂದು ಹೇಳಿದಳು.
ಅದರಲ್ಲಿ ಸ ರುಕ್ಕುವಿಗೆ ತುಂಬಾನೇ ಕಷ್ಟ ಇರ್ಬೇಕು ಅಲ್ವಾ...? ಎಂದು ನಾನು ಕೇಳಿದೆ.
ಅದಕ್ಕೆ ಲೀಲಕ್ಕ... ಅರೆ.. ನಿನಗೆ ಹೇಗೆ ಗೊತ್ತು ನೀಲು... ನೀನು ಸ ಸೀರಿಯಲ್ ಎಲ್ಲಾ ನೋಡ್ತೀಯಾ..ಕೇಳಿದರು.
ಇಲ್ಲ.. ಇಲ್ಲ... ಸೀರಿಯಲ್ ನಲ್ಲಿ ಎಲ್ಲಾ ನಾಯಕಿಯರಿಗೆ ಯಾವಾಗಲೂ ಕಷ್ಟವೇ ಅಲ್ವಾ....ಮತ್ತೆ ನಮ್ಮ ಹಾಗೆಯೇ ಅವರದ್ದು ಸ ಹೋರಾಟದ್ದೇ ಬದುಕು ಅಲ್ವಾ.. ಅಂದೆ.
ಅದಕ್ಕೆ ಅವರು ಕೂಡ ಒಟ್ಟಿಗೆ ನಗುತ್ತಾ... ಹೌದು... ಹೌದು ನಮ್ಮ ಹಾಗೆಯೇ ಹೋರಾಟ... ಎಂದು ಧ್ವನಿಗೂಡಿಸಿದರು.
ಏತಕ್ಕೆ ನಕ್ಕರೋ.. ನಾನು ಹೇಳಿದ್ದ ವ್ಯಂಗ ಅವರಿಗೆ ಎಷ್ಟು ಅರ್ಥವಾಯಿತೋ ದೇವರಿಗೆ ಗೊತ್ತು.
ವನಜಕ್ಕ ದಾಮಣ್ಣನಿಗೆಯೇ ಕೇಳಿದರು... ಈ ಸಲ ಪೇಪರ್ ನವರು, ಟಿವಿಯವರು ನಮ್ಮ ಪ್ರತಿಭಟನೆ ವರದಿ ಮಾಡಲು ಬರುವುದಿಲ್ಲವಾ ದಾಮಣ್ಣ.
ದಾಮಣ್ಣನಿಗೆ ಕೂಡ ಆಗಲೇ ನೆನಪಾಗಿದ್ದು ಅದು.
ಮಾಧ್ಯಮದವರಿಗೆಯೇ ಫೋನ್ ಮಾಡಿದರು ದಾಮಣ್ಣ.
ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇವೆ ಎಂಬ ಉತ್ತರ ಅವರಿಂದ ಬಂತು.
ಅದನ್ನು ಕೇಳಿ ರುಕ್ಕು ಮತ್ತೆ.... ಬನ್ನಿ ಬನ್ನಿ.. ಎಲ್ಲರೂ ಬನ್ನಿ... ನಾವು ಹೋರಾಟ ಶುರು ಮಾಡುವ... ಎಂದು ಎದ್ದು ನಿಂತು ಜೋರಾಗಿ ಘೋಷಣೆ ಕೂಗಲು ಶುರು ಮಾಡಿದಳು.
" ಎಲ್ಲಿಯವರೆಗೆ ಹೋರಾಟ...
ಗೆಲ್ಲುವವರೆಗೆ ಹೋರಾಟ.. "
ಕೊನೆಗೆ ಪೇಪರ್ ನವರು ಟಿವಿಯವರು ಕೂಡ ಅಲ್ಲಿಗೆ ಬಂದರು.
ಆದರೆ ಪಂಚಾಯಿತಿಯವರು ಬರುವ ಯಾವುದೇ ಲಕ್ಷಣಗಳು ಯಾವ ದಿಕ್ಕಿನಿಂದಲೂ ಗೋಚರಿಸುತ್ತಿರಲಿಲ್ಲ.
ಮೀಡಿಯಾದವರು ಪ್ರತಿಭಟನೆಗೆ ಕುಳಿತವರ ಒಂದಷ್ಟು ಪೋಟೋ ಹಾಗೂ ವೀಡಿಯೋ ಪೂಟೇಜ್ ಗಳನ್ನು ಕೂಡ ತೆಗೆದುಕೊಂಡರು.
ಹೋರಾಟಕ್ಕೆ ಕುಳಿತ ಮಹಿಳೆಯರ ಬಳಿ ಮಾಧ್ಯಮದವರು ಕೆಲವು ಪ್ರಶ್ನೆಗಳ್ನನು ಕೂಡ ಕೇಳಿದರು.
ವನಜಕ್ಕ, ಲೀಲಕ್ಕ, ಕುಸುಮಕ್ಕ, ಪ್ರಮೀಳಕ್ಕ ಒಕ್ಕೊರಲಿನಿಂದ ಹೇಳಿದರು... ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ... ನಮ್ಮ ಬೇಡಿಕೆ ಈಡೇರದಿದ್ದರೆ, ಪಂಚಾಯಿತಿಯವರನ್ನು ಚಚ್ಚಿ ಬಿಸಾಕುತ್ತೇವೆ...
ಅವರ ಮಾತಿಗೆ ಉಳಿದ ಮಹಿಳೆಯರು ಕೂಡ ಸಹಮತಿ ಸೂಚಿಸಿ... ಹೌದು... ಹೌದು... ಪಂಚಾಯಿತಿಯವರನ್ನು ನಾವೆಲ್ಲ ಚಚ್ಚಿ ಬಿಸಾಕುತ್ತೇವೆ... ಎಂದು ಒಕ್ಕೊರಲಿನಿಂದ ಹೇಳಿದರು.
ಇವರು ಚಚ್ಚಿ ಬಿಸಾಕುವ ದೃಶ್ಯಗಳು ಕೇವಲ ನನ್ನ ಕನಸಿನಲ್ಲಿ ಅಷ್ಟೇ ಬಂದಿದ್ದು ಬಿಟ್ಟರೆ.... ಅದು ನನಸಾಗುವ ಯಾವುದೇ ಲಕ್ಷಣಗಳು ನನಗೆ ಸಂಜೆ ಆಗುವವರೆಗೆ ಕೂಡ ಕಂಡು ಬರಲಿಲ್ಲ.ಮತ್ತು ಅಂತಹ ವಿಶ್ವಾಸ ಕೂಡ ನನಗೆ ಸದ್ಯಕ್ಕಂತು ಇರಲಿಲ್ಲ.
ಮಾಧ್ಯಮ ಮಿತ್ರರಲ್ಲೇ ಒಬ್ಬರು ಹೇಳಿದರು... ಇವತ್ತು ನಿಮ್ಮ ಪಂಚಾಯಿತಿ ಅಧ್ಯಕ್ಷರಿಗೆ ಹುಷಾರಿಲ್ಲ ಎಂದು ಸಿಟಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ ಅಲ್ವಾ...ಬಹುಶಃ ಪಂಚಾಯಿತಿಯ ಎಲ್ಲರೂ ಅಲ್ಲಿಗೆಯೇ ಹೋಗಿರಬೇಕು.. ನಿಮಗೆ ಗೊತ್ತಿಲ್ವಾ ಆ ವಿಷಯ..?
ನಿಜವಾಗಿಯೂ ನನಗೆ ಕೂಡ ಆ ವಿಷಯ ಗೊತ್ತಿರಲಿಲ್ಲ.
ಎಲ್ಲಾ ಹೋರಾಟಗಾರರು ನನ್ನನ್ನೇ ನೋಡಿದರು..
ನಂತರ ಹೇಳಿದರು... ಏನು ನೀಲು... ನಿನಗೆ ಇದು ಸ ಗೊತ್ತಿರಲಿಲ್ಲವಾ... ಈಗ ನಾವು ಯಾರಿಗೆ ಮನವಿ ಕೊಡುವುದು, ಬೆಳಿಗ್ಗೆಯಿಂದ ಮಾಡಿದ ನಮ್ಮ ಇಷ್ಟೂ ಉಗ್ರ ಹೋರಾಟ ವ್ಯರ್ಥ ಆಗಿ ಹೋಯಿತಲ್ಲ..
ಬೆಳಿಗ್ಗೆಯಿಂದ ಇವರು ಎಂತಹ ಉಗ್ರ ಹೋರಾಟ ಮಾಡಿದ್ದಾರೆ ಎಂದು ಬಹುಶಃ ನನಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವೇ ಇಲ್ಲ.
ನಾನೇ ಅವರಿಗೆ ಹೇಳಿದೆ... ನೋಡಿ ನಮ್ಮ ಹೋರಾಟದ ವಿಷಯ ಟಿವಿಯಲ್ಲಿ, ಪೇಪರ್ ನಲ್ಲಿ ಬಂದರೆ ಕೂಡ ಅಷ್ಟೇ ಸಾಕಾಗುತ್ತದೆ ಅವರಿಗೆ ಬಿಸಿ ಮುಟ್ಟಿಸಲು.. ಹಾಗಾಗಿ ಚಿಂತೆ ಮಾಡಬೇಡಿ. ಎಂದು ಹೇಳಿದೆ.
ಹಾಗಾದರೆ ಆಯಿತಲ್ಲಾ..ನಮ್ಮ ಇವತ್ತಿನ ಪ್ರತಿಭಟನೆ ಮುಗಿದಂತೆಯೇ...ಇನ್ನು ಚಹಾ ಕುಡಿದೇ ಹೋಗುವ... ಹೇಗೋ ಮಧ್ಯಾಹ್ನವೇ ಮಾಬಲಣ್ಣನಿಗೆ ಸಂಜೆಗೆ ಪೋಡಿ ಮಾಡಿ ಇಡ್ಲಿಕ್ಕೆ ಹೇಳಿದ್ದಿ ಅಲ್ವಾ... ಅದನ್ನು ಯಾಕೆ ಸುಮ್ಮನೆ ವೇಸ್ಟ್ ಮಾಡುವುದು... ಎಂದು ಹೇಳಿದರು ಲೀಲಕ್ಕ.ಅವರ ಮಾತಿಗೆ ಕುಸುಮಕ್ಕ, ವನಜಕ್ಕ,ಪ್ರಮಿಳಕ್ಕ ಕೂಡ ಧ್ವನಿಗೂಡಿಸಿದರು... ಹೌದು.. ಆರ್ಡರ್ ಕೊಟ್ಟದ್ದು ಸುಮ್ಮನೆ ವೇಸ್ಟ್ ಮಾಡುವುದು ಯಾಕೆ... ಎಂದು ಅವರೆಲ್ಲರ ಅಭಿಪ್ರಾಯವಾಗಿತ್ತು.
ಆಹಾ... ವೇಸ್ಟ್ ಆಗಿ ಹೋಗುವುದರ ಬಗ್ಗೆ ಇವರಿಗೆ ಎಷ್ಟೊಂದು ಕಾಳಜಿ ಇದೆ ಎಂದು ಒಮ್ಮೆ ಅನಿಸಿತು.
ಪುಣ್ಯಕ್ಕೆ ನಮ್ಮ ಇಂತಹದ್ದೊಂದು ಉಗ್ರ ಹೋರಾಟವನ್ನು ನೋಡಲು ಶಿಸ್ತಿನ ಮನುಷ್ಯ ಮಿಲಿಟ್ರಿ ಮೋನಪ್ಪನವರು ಬರದೇ ಇದ್ದುದೇ ಎಷ್ಟೋ ಒಳ್ಳೆಯದಾಯಿತೆಂದು ಅನಿಸಿತು.
ಅಣ್ಣಾ..... ಮಾಬಲಣ್ಣನಿಗೆ ಮಧ್ಯಾಹ್ನವೇ ಪೋಡಿ ಮತ್ತು ಕಾಫಿಯ ಹಣ ಕೂಡ ಕೊಟ್ಟು ಬಂದಿದ್ದೇನೆ...ಹೋಗಿ ಪೋಡಿ ತರ್ಲಾ... ಎಂದು ಕೇಳಿದ ಪೊಲ್ಲ.
ಆಯಿತು ಮಾರಾಯ.... ಬೇಗ ಹೋಗಿ ಬಾ.. ಕಾಫಿ ತಣ್ಣಗೆ ಆದರೆ ಅದು ಕೂಡ ಕಷ್ಟವೇ ನಂತರ... ಎಂದು ಹೇಳಿದೆ.
ಪೊಲ್ಲ ಮಾಬಲಣ್ಣನ ಹೋಟೆಲ್ ಗೆ ರಪ್ಪ ಅಂತ ಹೋಗಿ ರಪ್ಪ ಅಂತ ಬಂದ.
ಕಾಫಿ ಕುಡಿದು ಪೋಡಿ ಸೇವನೆ ಆದ ನಂತರ... ಎಲ್ಲರೂ ಅವರವರ ಮನೆಗೆ ಹೊರಡಲು ರೆಡಿ ಆದೆವು..
ಲೀಲಕ್ಕ ಮತ್ತೆ ಹೇಳಿದರು...
ಏನು ನೀಲು.. ನೀನೇ ಹೀಗೆ ಮಾಡಿದರೆ ಹೇಗೆ... ಇನ್ನಾದರೂ ಪ್ರತಿಭಟನೆ ಮಾಡುವಾಗ... ಯಾರು ಇದ್ದಾರೆ... ಯಾರು ಇಲ್ಲ... ಎಂಬುದನ್ನೆಲ್ಲಾ ಸರಿಯಾಗಿ ತಿಳಿದುಕೊಂಡೇ ಪ್ಲ್ಯಾನ್ ಮಾಡಿ ಪ್ರತಿಭಟನೆಯ ದಿನಾಂಕ ಪಿಕ್ಸ್ ಮಾಡು..ಇಲ್ಲದಿದ್ದರೆ ಇವತ್ತಿನ ಹಾಗೆ ಸರಿಯಾಗಿ ಮನವಿ ಕೂಡ ಕೊಡಲು ಆಗುವುದಿಲ್ಲ ನಮಗೆ...
ಲೀಲಕ್ಕನ ಮಾತಿಗೆ ಎಲ್ಲಾ ಮಹಿಳಾ ಉಗ್ರ ಹೋರಾಟಗಾರರ ಬೆಂಬಲವಿತ್ತು... ಅದನ್ನು ಅವರು ಬಾಯಿ ಬಿಟ್ಟು ಹೇಳದಿದ್ದರೂ ಅವರೆಲ್ಲರ ಮುಖದಲ್ಲಿ ಅದು ಎದ್ದು ಕಾಣುತ್ತಿತ್ತು... ಎಂತ ಮಾರಾಯ ಒಂಚೂರು ಶಿಸ್ತು ಇಲ್ಲ... ಜವಾಬ್ದಾರಿ ಅಂತು ಮೊದಲೇ ಇಲ್ಲ... ಎಂಬಂತೆ ನನ್ನನೇ ಒಮ್ಮೆ ಮೇಲೆ ಕೆಳಗೆ ನೋಡಿ ತಮ್ಮ ತಮ್ಮ ಕೊಡಪಾನ ಹಿಡಿದುಕೊಂಡು ಮನೆಯ ಕಡೆಗೆ ಹೆಜ್ಜೆ ಹಾಕಿದರು.
ಕನಸಿನಲ್ಲಿ ಮಾತ್ರ ನಮ್ಮ " ನೀರಿಗಾಗಿ ಪ್ರಾಣ ಕೊಡುವೆವು " ಪ್ರತಿಭಟನೆ ಯಶಸ್ವಿಯಾದ ಖುಷಿಗೆ ಮಹಿಳೆಯರು ಮನೆಗೆ ಹೊರಡುವಾಗ ಕೊನೆಯಲ್ಲಿ "ನೀಲಮೇಘನಿಗೆ.... ಜೈ", "ನೀಲುವಿಗೆ.... ಜೈ" , " ಮಣ್ಣಿನ ಮಗ ನೀಲುವಿಗೆ... ಜೈ", " ಸಮಾಜ ಸುಧಾರಕ - ಬಡವರ ಬಂಧು - ಆಕಾಶದೀಪ - ಆಶಾಕಿರಣ ನೀಲುವಿಗೆ... ಜೈ" ಎಂದೆಲ್ಲ ಕನಸ್ಸಿನಲ್ಲಿ ನನಗೆ ಜೈಕಾರ ಹಾಕಿದ್ದರು. ಆದರೆ ನಿಜದಲ್ಲಿ ಅಂತಹ ಮ್ಯಾಜಿಕ್ ಏನು ಆಗದೆ ತೀವ್ರ ಮುಖಭಂಗ ಆಗಿತ್ತು ನನಗೆ.
ನಮ್ಮ ಹೋರಾಟಕ್ಕೆ ಮೊದಲ ಬಾರಿಗೆ ಬಂದಿದ್ದ ಭಾಮ ನನ್ನ ಮುಖವನ್ನೇ ಹಾಗೇ ನೋಡಿದಳು..
ಹೇಗಿತ್ತು ನಮ್ಮ ಉಗ್ರ ಪ್ರತಿಭಟನೆ ಎಂದು ಅವಳಲ್ಲಿ ಕೇಳುವ ಮನಸ್ಸಾಗಲಿಲ್ಲ ನನಗೆ.
ಏಕೆಂದರೆ... ಇದೂ ಒಂದು ಉಗ್ರ ಪ್ರತಿಭಟನೆಯಾ... ಎಂಬ ಉತ್ತರವೇ ಅವಳ ಮುಖದಲ್ಲಿ ತುಂಬಿ ಅದಾಗಲೇ ತುಳುಕಾಡುತ್ತಿತ್ತು.
ಅವಳು ಬುಲ್ಲೆಟ್ ಸ್ಟಾರ್ಟ್ ಮಾಡಿದಳು.
ಹಿಂದಿನಿಂದ ಕುಳಿತುಕೊಂಡೆ.
ಬುಲ್ಲೆಟ್ ನಿಧಾನಕ್ಕೆ ಹೋಗಲು ಶುರು ಮಾಡಿತು.
ಅದಾಗಲೇ ಪೊಲ್ಲ ಹಾಗೂ ರುಕ್ಕು ಅವರ ಸ್ಕೂಟಿಯಲ್ಲಿ ನಮಗಿಂತ ಸ್ವಲ್ಪ ಮುಂದೆ ಹೋಗಿ ಆಗಿತ್ತು.
ಸ್ಕೂಟಿಯಲ್ಲಿ ಹಿಂದೆ ಕುಳಿತುಕೊಂಡಿದ್ದ ರುಕ್ಕು ಈಗಲೂ ಸಹ ರಾಗವಾಗಿಯೇ ಅವಳಷ್ಟಕ್ಕೆ ಘೋಷಣೆ ಕೂಗುತ್ತಲೇ ಹೋಗುತ್ತಿದ್ದಳು...
" ಏನೇ ಬರಲಿ,
ಒಗ್ಗಟಿರಲಿ"
ಎಲ್ಲಿಯವರೆಗೆ ಹೋರಾಟ,
ಗೆಲ್ಲುವವರೆಗೆ ಹೋರಾಟ...
ಬೇಕೇ ಬೇಕು,
ನ್ಯಾಯ ಬೇಕು..
ಏತಕ್ಕಾಗಿ ಹೋರಾಟ,
ನ್ಯಾಯಕ್ಕಾಗಿ ಹೋರಾಟ... "
.....................................................................................
#ನೀಲಮೇಘ💙
Ab Pacchu
Moodubidire
Comments
Post a Comment