Karnan
#Karnan | Prime
ದುರ್ಯೋಧನ, ಅಭಿಮನ್ಯು, ದ್ರೌಪದಿ ಹಾಗೂ ಕರ್ಣ...
ಇದು ಆ ಕುಗ್ರಾಮದ ಕೆಲವು ಬಡ ಜನರ ಹೆಸರುಗಳು.
ತಂದೆಯಂದಿರ ಹೆಸರುಗಳು ಎಂದಿನಂತೆ ಪೊನ್ನುಸ್ವಾಮಿ,ರಂಗಸ್ವಾಮಿಯಂತಹ ಹೆಸರುಗಳೇ ಆಗಿದ್ದರೂ ಸಹ.. ಆ ಗ್ರಾಮದ ಜನರು ಅವರಿಗೆ ಯಾವ ಯಾವ ಹೆಸರುಗಳು ಇಷ್ಟ ಆಗುತ್ತದೋ ಅದನ್ನೇ ಇಷ್ಟ ಪಟ್ಟು ಇಟ್ಟುಕೊಂಡಿರುತ್ತಾರೆ.
ತಪ್ಪೇ ಇಲ್ಲ..
ಅದು ಅವರ ಇಷ್ಟ.
ಆದರೆ ಈ ಕಥೆಯಲ್ಲಿ ಬರೀ ಇಷ್ಟನೇ ಸಹಿಸಿಕೊಳ್ಳಲಾಗದ ವ್ಯವಸ್ಥೆ ಕೂಡ ಒಂದು ಅಲ್ಲಿದೆ..!
ಕೇವಲ ಹೆಸರು ಮಾತ್ರ ಅಲ್ಲ....
ಈ ಜನರೆಲ್ಲಾ ಅಲ್ಲಿ ಎಂದಿಗೂ ತಲೆ ತಗ್ಗಿಸಿಯೇ ನಡೆಯಬೇಕು,ನಡು ಬಗ್ಗಿಸಿಯೇ ನಿಲ್ಲಬೇಕು ಎಂಬ ಅಲಿಖಿತ ನಿಯಮಕ್ಕೆ ಒಳಪಟ್ಟವರು.
ಅವರು ತಲೆ ಎತ್ತಿ ನಡೆಯುವುದನ್ನು ಕೂಡ ಅಲ್ಲಿಯದ್ದೊಂದು ಸಿಸ್ಟಂ ಎಂದಿಗೂ ಸಹಿಸದು.
ಒಂದು ಬಸ್ ನಿಲ್ದಾಣ ಕೂಡ ಇಲ್ಲದ.. ರೋಡಿನಲ್ಲಿ ಹೋಗುವ ಬಸ್ಸುಗಳು ಕೂಡ ಆ ಊರಿನ ಹತ್ತಿರ ನಿಲ್ಲಲು ಎಂದಿಗೂ ಮನಸ್ಸು ಮಾಡದ... ಆ ಊರಿನ ಜನರೆಲ್ಲಾ ಹೆಚ್ಚಾಗಿ ಒಂದೇ ಪಂಗಡಕ್ಕೆ ಸೇರಿದವರು.
ಅವರ ಮೇಲಿನ ದೌರ್ಜನ್ಯ ,ದಬ್ಬಾಳಿಕೆ ಹಾಗೂ ನಿರ್ಲಕ್ಷ್ಯ.. ದಶಕಗಳಿಂದ ಹಾಗೇ ಮುಂದುವರಿದಿದೆ.ಯೆಸ್.. ಬಿಟ್ಟು ಬಿಡದೇ ನಿರಂತರವಾಗಿ.
ಜನ ಹೆಚ್ಚು ಕಡಿಮೆ ಕತ್ತೆಯ ಹಾಗೆಯೇ ಬದುಕಿ ಬಿಟ್ಟಿದ್ದಾರೆ.
ಅಂತಹ ಊರಲ್ಲಿ ಒಂದು ಕತ್ತೆಯೂ ಕೂಡ ಇದೆ!
ಅಷ್ಟು ಮಾತ್ರವಲ್ಲ ಒಂದು ಕುದುರೆಯೂ ಇದೆ!!
ಆ ಕತ್ತೆಯ ಎದುರಿನ ಎರಡು ಕಾಲುಗಳನ್ನು ಒಟ್ಟಿಗೆ ಮಾಡಿ ಹಗ್ಗದಿಂದ ಕಟ್ಟಲಾಗಿರುತ್ತದೆ.
ಎಷ್ಟೋ ಸಮಯದಿಂದ ಅದು ಹಾಗೆಯೇ ಇದೆ.
ಅದರ ಕಾಲಿನ ಕಟ್ಟನ್ನು ಬಿಡಿಸಿದವರಿಲ್ಲ.
ಹಾಗಾಗಿ ಅದು ಬಹಳ ಕಷ್ಟ ಪಟ್ಟುಕೊಂಡೇ ಮೆಲ್ಲಗೆ ಮೆಲ್ಲಗೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಊರ ತುಂಬಾ ಅದರಷ್ಟಕ್ಕೆ ಓಡಾಡುತ್ತಿರುತ್ತದೆ...... ಹೆಚ್ಚು ಕಡಿಮೆ ಆ ಊರಿನ ಜನರ ರೀತಿಯೇ!
ಯಾರಿಗೂ ಆ ಕತ್ತೆಯ ಕಡೆಗೆ ಲಕ್ಷ್ಯವೇ ಇಲ್ಲ!
ಅದೊಂದು ದಿನ ಅವನೊಬ್ಬ ಆ ಕತ್ತೆಯ ಕಾಲಿಗೆ ಕಟ್ಟಿರುವ ಆ ಕಟ್ಟನ್ನು ಬಿಚ್ಚಿ ಬಿಡುತ್ತಾನೆ.. ಅದನ್ನು ಆ ದಿನದಿಂದ ಸ್ವತಂತ್ರಗೊಳಿಸುತ್ತಾನೆ.
ಅಷ್ಟೇ...!
ಆ ಕ್ಷಣದಿಂದಲೇ ಊರಿನ ಕಥೆಯೇ ಬದಲಾಗಿ ಬಿಡುತ್ತದೆ... ಜೊತೆ ಜೊತೆಗೆ ಆ ಊರಿನ ಜನರೂ ಕೂಡ!!
ಊರಿನ ದಾರಿಯಲ್ಲಿ ಸ್ಟಾಪ್ ಕೊಡದೇ ಹೋಗುವ ಬಸ್ಸು,ಆ ದಿನ ಮಾತ್ರ ನಡು ರೋಡಿನಲ್ಲಿಯೇ ಇನ್ನಿಲ್ಲದಂತೆ ಪುಡಿ ಪುಡಿಯಾಗಿ ಹೋಗಿ ಬಿಡುತ್ತದೆ!!!
ಬರೀ ಬಸ್ಸು ಪುಡಿಯಾಗುವುದೇ ಇದರ ಕಥೆ ಖಂಡಿತವಾಗಿಯೂ ಅಲ್ಲ..
ಇಲ್ಲಿಯ ಹೋರಾಟಕ್ಕೆ ಬೇರೆಯೇ ಒಂದು ಕಥೆ ಇದೆ.
ಏತಕ್ಕಾಗಿ ಈ ಹೊಡೆದಾಟ..?
ಏತಕ್ಕಾಗಿ ಈ ಬಡಿದಾಟ..?
ಆ ಕಥೆಗಾಗಿ ನೀವು ಮೂವಿಯನ್ನೇ ನೋಡಬೇಕು.
ಗ್ರಾಮವೊಂದು ದೌರ್ಜನ್ಯಕ್ಕೆ ಸಡ್ಡು ಹೊಡೆದು ನಿಲ್ಲುವ ಆ ಕಥೆ ನಿಜಕ್ಕೂ ಬಲು ರೋಚಕವಾದದ್ದು.
ಈ ಕಥೆಯಲ್ಲಿ ಊರವರು ಕೊಡುವ ಒಂದೊಂದು ಏಟು ಕೂಡ ನಿಮಗೂ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ ಎಂದರೆ... ಅದು ಕಥೆಯನ್ನು ಆ ರೇಂಜಿಗೆ ತೆಗೆದುಕೊಂಡು ಹೋಗಿ ಬಿಲ್ಡ್ ಮಾಡಿದ್ದೇ ಆಗಿದೆ..
Mari Selvaraj ಇದನ್ನು ನಿರ್ದೇಶಿಸಿದ್ದಾರೆ.Background score ಅಂತು ಸಿಕ್ಕಾಪಟ್ಟೆ ಚೆನ್ನಾಗಿದೆ. ಆ ಬೊಬ್ಬೆ,ಆ ಚೀರಾಟ, ಆರ್ತನಾದ ಇನ್ನಿಲ್ಲದಂತೆ ಕಿವಿ ಕೊರೆಯುತ್ತದೆ.
Danush ಮತ್ತು Lal ಜೋಡಿ ತುಂಬಾನೇ ಇಷ್ಟ ಆಗುತ್ತಾರೆ. ಕಡ್ಡಿ ತರಹ ಕಾಣುವ Danush ಇಲ್ಲಿ ಕಡ್ಡಿ ಮುರಿವಂತೆ ಒಬ್ಬೊಬ್ಬರ ನಡು ಮುರಿಯಲು ಕುದುರೆಯೇರಿಯೇ ಮುನ್ನುಗಿ ಬಿಡುತ್ತಾನೆ.Rajisha Vijayan, Yogi Babu, Natarajan Subramaniam ಮುಂತಾದವರ ಅಭಿನಯ ಕೂಡ ಇದಕ್ಕಿದೆ.
ಈ ಕಥೆ 1995 ರ Thoothukudi ಜಿಲ್ಲೆಯ Kodiyankulam caste violence ನ ನಿಜ ಘಟನೆಯಿಂದ ಪ್ರೇರಿತವಾದದ್ದು ಎಂದು ಹೇಳಲಾಗುತ್ತದೆ.ಮೊದಲ ಫ್ರೇಮ್ ನಿಂದ ಕೊನೆಯ ಫ್ರೇಮ್ ವರೆಗೂ ನೋಡುಗನನ್ನು ಕಥೆಯೊಳಗೆ ಹಿಡಿದಿಟ್ಟುಕೊಳ್ಳುವ ತಾಕತ್ತು ಈ ಕಥೆಗೂ ಇದೆ.. ಆ ಊರಿನ ಜನರಿಗೂ ಇದೆ.
#Karnan | Prime
Tamil Movie
Action Drama
Year - April 2021
#Movies
Ab Pacchu
Moodubidire
(https://phalgunikadeyavanu.blogspot.com)





Comments
Post a Comment