ದೂರ ಇನ್ನೂ ದೂರ..!



                                        "ಪುಷ್ಯರಾಗ" 

                                (ದೂರ ಇನ್ನೂ ದೂರ....!)




        " ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ

          ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ, 

          ಅವನ ನಿಯಮ ಮೀರಿ ಇಲ್ಲಿ ಏನು ಸಾಗದು

          ನಾವು ನೆನೆಸಿದಂತೆ ಬಾಳಲೇನು ನಡೆಯದು.. 


          ವಿಷಾದವಾಗಲಿ,ವಿನೋದವಾಗಲಿ

          ಅದೇನೆ ಆಗಲಿ ಅವನೆ ಕಾರಣ.. 


          ಬಾನಿಗೊಂದು ಎಲ್ಲೆ ಎಲ್ಲಿದೆ,

          ನಿನ್ನಾಸೆಗೆಲ್ಲಿ ಕೊನೆಯಿದೆ 

          ಏಕೇ ಕನಸು ಕಾಣುವೆ,

          ನಿಧಾನಿಸು ನಿಧಾನಿಸು....... "


- ಉಹೂಂ...ಬೇಡ,ಈ ಹಾಡು ಬೇಡ,ಬದಲಾಯಿಸು!


- ಏಕೆ..?


- ಇಷ್ಟವಾಗಲಿಲ್ಲ!! 


- ಹ್ಞೂಂ.. ಮತ್ತೆ ಇದು?


        " ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

          ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು, 


          ನಿನ್ನ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ

          ಜೀವನಾ ಸಾಗದು ಜೀವನಾ ಸಾಗದು... 

        

          ಸೂರ್ಯ ಬರದೆ ಕಮಲವೆಂದು ಅರಳದು

          ಚಂದ್ರನಿರದೆ ತಾರೆಯೆಂದು ನಲಿಯದು, 

          ಸೂರ್ಯ ಬರದೆ ಕಮಲವೆಂದು ಅರಳದು

          ಚಂದ್ರನಿರದೆ ತಾರೆಯೆಂದು ನಲಿಯದು..

          ಒಲವು ಮೂಡದಿರಲು ಮನವು ಅರಳದು

          ಮನವು ಅರಳದಿರಲು ಗೆಲುವು ಕಾಣದು

          ಮನವು ಅರಳದಿರಲು ಗೆಲುವು ಕಾಣದು.. 


          ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.. "


- ಉಹೂಂ..ಇದೂ ಬೇಡ! 


- ಹಾಗಾದರೆ ಇನ್ಯಾವ ಹಾಡು ಹಾಕಲಿ? ಅದಾದರೂ ಹೇಳು


- ನಿನ್ನ ಈ ಕಾರಿನಲ್ಲಿ ಇರುವುದು ಸದಾ ಕೇಳುವುದು ಹೆಚ್ಚೆಂದರೆ ಇದೇ ಐದಾರು ಹಾಡುಗಳಲ್ಲವೇ ಪುಷ್ಯರಾಗ...?! 


- ಹ್ಞೂಂ..


-  ನನ್ನ ಮೊಬೈಲ್ ನಿಂದ ಪ್ಲೇ ಮಾಡಲೇ? 


- ಮಾಡು..ಬ್ಲೂಟೂತ್ ಕನೆಕ್ಟ್ ಮಾಡಿಕೊಂಡು ಯಾವ ಹಾಡು ಬೇಕೋ ಅದನ್ನೇ ಪ್ಲೇ ಮಾಡು..


- ಹ್ಞೂಂ.. 


         " ಬಾ ಸಂಪಿಗೆ ಸವಿಭಾವ ಲಹರಿ

           ಹರಿಯೇ ಪನ್ನೀರ ಜೀವನದಿ

           ಬಾ ಮಲ್ಲಿಗೆ ಮಮಕಾರ ಮಾಯೆ

           ಲೋಕದ ಸುಖವೆಲ್ಲ ಓ..ಓ..ಓ..

           ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ

           ಇರುವಂಥ ನೂರು ಕಹಿ ಇರಲಿರಲಿ ನನಗಾಗಿ

           ಕಾಯುವೆನು ಕೊನೆವರೆಗೂ ಕಣ್ಣಾಗಿ...


           ನೂರು ಜನ್ಮಕೂ,ನೂರಾರು ಜನ್ಮಕೂ

           ಒಲವ ಧಾರೆಯೆ ಒಲಿದೊಲಿದು ಬಾರೆಲೇ

           ನನ್ನ ಆತ್ಮ ನನ್ನ ಪ್ರಾಣ ನೀನೆಂದು..


           ನೂರು ಜನ್ಮಕ್ಕೂ... "


- ಇದು ಹೇಗಿದೆ? 


- ಎಷ್ಟಾದರೂ ನಿನ್ನ ಆಯ್ಕೆ ಅಲ್ಲವೇ ಪುನರ್ವಸು,ಹೂಂ.. ಯಾವತ್ತಿದ್ದರೂ ಚೆನ್ನಾಗಿಯೇ ಇರುತ್ತದೆ. 


- ಅದು ಹೇಗೆ? 


- ಉದಾಹರಣೆಗೆ ನಾನೇ ಇಲ್ಲವೇ. 


- ಹಾಗಾದರೆ ನಿನ್ನ ಆಯ್ಕೆ ಚೆನ್ನಾಗಿರಲಿಲ್ಲವೇ?! 


- ನೂರಕ್ಕೆ ಇನ್ನೂರರಷ್ಟು ಚೆನ್ನಾಗಿಯೇ ಇತ್ತು!


            “ SCREEEEEECH...!! "


-ಯಾಕೆ ಇಷ್ಟು ಜೋರಾಗಿ ಬ್ರೇಕ್ ?


- ಎದುರಿನವನು ಕಾರಿನಡಿಗೆ ಬಿದ್ದು ಸತ್ತೇ ಹೋಗುತ್ತಿದ್ದ! 


- ನೋಡಿಕೊಂಡು ಕಾರು ಓಡಿಸಬಾರದೇ ಪುರು.ನಿನಗೇನಾದರೂ ಆದರೆ? 


- ನೋಡಿಕೊಂಡೇ ಓಡಿಸುತ್ತಿದ್ದೇನೆ ವಸು,ವಿರುದ್ಧ ದಿಕ್ಕಿನಲ್ಲಿ ಆ ಬೈಕ್ ನುಗ್ಗಿದರೆ ನಾನು ಏನು ಮಾಡಲಿ ಹೇಳು,ಅದೂ ಈ ಕತ್ತಲಿಗೆ.ಸರಿಯಾಗಿ ಬ್ರೇಕ್ ಹಾಕಿದ್ದಕ್ಕೆ ಅವನು ಹೇಗೋ ಬದುಕಿಕೊಂಡ.ಹೂಂ..ಒಂದು ರೀತಿಯಲ್ಲಿ ನಾವು ಕೂಡ ಬದುಕಿಕೊಂಡೆವು ಎಂದೇ ಹೇಳಬಹುದು ಬಿಡು!


- ನಿನಗೆ ಅನಿಸುತ್ತದೆಯೇ?


- ಏನು?! 

           

- ನಾವು ಬದುಕಿದೆವು,ಬದುಕ್ಕಿದ್ದೇವೆ ಎಂದು ನಿನಗೆ  ಅನಿಸುತ್ತದೆಯೇ !? 


- ಹ್ಞೂಂ.. 


           " Vroom....vroom...vroooooooom..."


- ಸ್ವಲ್ಪ ಮೆಲ್ಲಗೆ ಕಾರು ಓಡಿಸು ಪುರು,ನನಗಂತು ಗಮ್ಯ ತಲುಪುವ ಅಂತಹ ಯಾವುದೇ ಅವಸರವಿಲ್ಲ!.ನಿನಗೆ ಆದರೂ ಏತಕ್ಕಾಗಿ ಇಷ್ಟೊಂದು ಅವಸರ.ಒಟ್ಟಿನಲ್ಲಿ ನೀನು ಒಳ್ಳೆಯವನಾಗಬೇಕು ಅಲ್ಲವೇ?! ಇಲ್ಲದಿದ್ದರೆ ಒಂದು ಕೆಲಸ ಮಾಡು,ಹಾಗೇ ವೇಗವಾಗಿ ಓಡಿಸಿ ಯಾವುದಾದರೂ ತಿರುವಿನಲ್ಲಿ ಕಾರನ್ನು ಇಳಿಜಾರಿಗೆನೇ ಬೀಳಿಸಿ ಅಪಘಾತವಾದರೂ ಮಾಡಿಬಿಡು ಪುರು.ನಿನ್ನೆದುರೇ ಸತ್ತು ಹೋಗುತ್ತಿದ್ದೇನೆ ಎಂಬ ಖುಷಿಯಾದರೂ ನನ್ನೊಂದಿಗಿರಲಿ!! 


- ಹ್ಞೂಂ..


           " ನೆನಪಿದೆಯೆ ಮೊದಲಾ ನೋಟ

             ನೆನಪಿದೆಯೆ ಮೊದಲಾ ಸ್ಪರ್ಶ

             ನೆನಪಿದೆಯೆ ಮುತ್ತನು ತಂದಾ ಆ ಮೊದಲ ಚುಂಬನ


             ನೆನಪಿದೆಯೆ ಮೊದಲಾ ಕನಸು

             ನೆನಪಿದೆಯೆ ಮೊದಲಾ ಮುನಿಸು

             ನೆನಪಿದೆಯೆ ಕಂಬನಿ ತುಂಬಿ ನೀ ನಿಟ್ಟ ಸಾಂತ್ವನಾ..


             ನೀ ಇಲ್ಲವಾದರೆ ನಾ ಹೇಗೆ ಬಾಳಲೀ.. 

             ನೀ ಅಮೃತಧಾರೆ ಕೋಟಿ ಜನುಮ ಜತೆಗಾತಿ

             ನೀ ಅಮೃತಧಾರೆ ಇಹಕು ಪರಕು ಸಂಗಾತಿ

             ನೀ ಇಲ್ಲವಾದರೆ ನಾ... ಹೇಗೆ ಬಾಳಲಿ


             ಹೇ ಪ್ರೀತಿ ಹುಡುಗ,ಕೋಟಿ ಜನುಮ ಜೊತೆಗಾರ

             ಹೇ ಪ್ರೀತಿ ಹುಡುಗ,ನನ್ನ ಬಾಳ ಕಥೆಗಾರ

             ನೀ ಇಲ್ಲವಾದರೆ ನಾ ಹೇಗೆ ಬಾಳಲೀ... "


- ವಸು..


- ಏನು?


- ಈ ಹಾಡು ಈಗ ಬೇಕಿತ್ತಾ?


- ಇದು ನಮ್ಮಿಬ್ಬರ ಇಷ್ಟದ ಹಾಡಲ್ಲವೇ ಪುರು,ಈಗ ಇದೇ ಬೇಡವೇ?


- ಹ್ಞೂಂ.. 


- ಒಂದು ಹೇಳು ಪುರು,ನಿನಗೆ ಬದುಕಿನಲ್ಲಿ ಬೇಕಾಗಿದ್ದರೂ ಯಾವುದು? ನನಗದು ಎಂದಿಗೂ ಅರ್ಥವೇ ಆಗಿಲ್ಲ..ಬಹುಶಃ ಅದು ಯಾವತ್ತಿಗೂ ಅರ್ಥ ಆಗುವುದೂ ಇಲ್ಲ! 


- ಬದುಕೆಂದರೆ ಹಾಗೇ ಅಲ್ಲವೇ ವಸು..ಸುಲಭಕ್ಕೆ ಅದು ಅರ್ಥ ಆಗುವುದೂ ಇಲ್ಲ,ನಮಗೆ ಬೇಕಾಗಿದಂತೆ ಅದು ಇರುವುದೂ ಇಲ್ಲ..ನಮ್ಮೆದುರು ಬಂದಂತೆಯೇ ಬದುಕು.


- ಪುರು ನನಗೆ ಕೆಲವೊಮ್ಮೆ ಅನಿಸುತ್ತದೆ. 


             " Keeeiyeeeiiiiiiiiiiiiiiiiiiiiiiin....." 


-ಏತಕ್ಕಾಗಿ ಇಷ್ಟು ಉದ್ದಕ್ಕೆ,ಇಷ್ಟು ಜೋರಾಗಿ ಹಾರನ್?! 


- ಕಡಿದಾದ ತಿರುವು,ಎದುರಿಂದ ಬರುವವರಿಗೂ ಕೇಳಲಿ ಎಂದು. 


- ಹ್ಞೂಂ... 


- ಹಾನ್.. ಹೇಳು ವಸು,ಅದೇನೋ ಅನಿಸುತ್ತದೆ ಅಂದೆಯಲ್ಲಾ.. ಏನದು? 


- ನನಗೆ ಕೆಲವೊಮ್ಮೆ ಅನಿಸುತ್ತದೆ ಪುರು,ನನಗೆ ನೀನು ಸಿಗಬಾರದಿತ್ತು ಎಂದು ! 


- ಹ್ಞೂಂ...!


- ಹೇಳಬೇಕೆಂದರೆ ನಾನು ನನ್ನಷ್ಟಕ್ಕೆ ಸುಖವಾಗಿದ್ದೆ ಪುರು.ನಾನು ನೆಲ ಬಿಟ್ಟ ಚಿಟ್ಟೆಯಾಗಿದ್ದೆ,ಮುಗಿಲು ಮುಟ್ಟಿದ ಹಕ್ಕಿಯಾಗಿದ್ದೆ,ಗರಿ ಬಿಚ್ಚಿ ಕುಣಿವ ನವಿಲಾಗಿದ್ದೆ.ನಾನು ಓಡುತ್ತಿದ್ದೆ,ಸಂತೋಷದಿಂದ ನಲಿಯುತ್ತಿದ್ದೆ,ನುಲಿಯುತ್ತಿದ್ದೆ,ಮನಸ್ಸಾದಾಗಲೆಲ್ಲ ನನ್ನಿಷ್ಟದ ಹಾಡು ಹಾಡುತ್ತಿದ್ದೆ.ಒಟ್ಟಿನಲ್ಲಿ ನಾನು ಖುಷಿಯಾಗಿದ್ದೆ.ಆದರೆ ಒಂದು ದಿನ ನೀನು ಸಿಕ್ಕೆ.ನೀನು ಸಿಕ್ಕ ನಂತರ ನನ್ನ ಆ ಖುಷಿ ಇನ್ನಷ್ಟು ಅನಂತವಾಗುವುದೆಂದೇ ನಾನು ತಿಳಿದುಕೊಂಡಿದ್ದೆ,ಆದರೆ... 


               " Keeiyeeiin..keeiyeeiin.. Vroooooom... " 


- ಆದರೆ ಯಾವ ಖುಷಿಗಾಗಿ ನೀನು ನನಗೆ ಸಿಕ್ಕೆ ಹೇಳು ಪುರು?. ಈ ಖುಷಿಗೆಯೇ!? ನನಗೆ ಇದೆಲ್ಲಾ ಅರ್ಥವಾಗುವುದಿಲ್ಲ.ಎಂದಿಗೂ ಒಂದು ಆಗಬಾರದೆಂದೇ ಇದ್ದರೆ,ಈ ಪಾಪಿ ಬದುಕು ಏತಕ್ಕಾಗಿ ಅಂತಹ ಜನರನ್ನೇ  ಬೇಕೆಂದೇ ಪರಸ್ಪರ ಮುಖಾಮುಖಿ ಮಾಡಿಸುತ್ತದೆ?!!


                  " Keeeiyeeeiiiiiiiiin....." 


- ನನಗನಿಸುತ್ತದೆ ಪುರು.ನಾವಿಬ್ಬರೂ ನದಿಯ ಎರಡು ದಂಡೆಗಳಿದ್ದಂತೆ,ಎರಡೂ ಪರಸ್ಪರ ಎದುರು ಬದುರು  ಇದ್ದರೂ,ಎಂದಿಗೂ ಒಟ್ಟು ಸೇರುವ ಭಾಗ್ಯವೇ ಆ ಎರಡು ದಂಡೆಗಳಿಗಿಲ್ಲ..! 


- ಹ್ಞೂಂ.. 


- ಹೇಳು ಪುರು,ಏನಾದರೊಂದು ಹೇಳು.. ನಿನಗೆ ಏನೂ ಅನಿಸುತ್ತಿಲ್ಲವೇ? 


- ಅನಿಸುತ್ತದೆ. 


- ಏನು ಅನಿಸುತ್ತದೆ ? 


- ಆತ್ಮಹತ್ಯೆ ಮಹಾ ಪಾಪ!! 


- ಆದರೆ..ಆದರೆ ನನಗೆ ನಿನ್ನನ್ನು ಬಿಟ್ಟರೆ,ಸಾಯುವುದೊಂದನ್ನು ಬಿಟ್ಟು ಬೇರೆ ಯಾವ ಆಯ್ಕೆಯೂ ನನ್ನಲ್ಲಿರಲಿಲ್ಲ ಪುರು!! 


- ನಿನ್ನ ತಂದೆ ತಾಯಿಗೆ ನೀನು ಅಂತ ಬಿಟ್ಟರೆ ಬೇರೆ ಯಾರು ಇದ್ದರು ಹೇಳು? ಅವರ ಗೌರವ ಮಣ್ಣು ಪಾಲು ಆಗುತ್ತಿರಲಿಲ್ಲವೇ?! ಅವರು ಸಹ ನಿನ್ನನ್ನು ನನಗಿಂತಲೂ ಹೆಚ್ಚು ಪ್ರೀತಿಸಿದವರೇ ಅಲ್ಲವೇ ವಸು!! 


- ನಾನು ಅವರಷ್ಟೇ ನಿನ್ನ ಮೇಲೆ ಕೂಡ ನನ್ನ ಪ್ರಾಣವನ್ನೇ  ಇಟ್ಟುಕೊಂಡಿದ್ದೆ ಪುರು!! 


- ಸತ್ತು ಹೋಗಿ ಬಿಟ್ಟರೆ ಎಲ್ಲಾ ಸಮಸ್ಯೆ ಪರಿಹಾರ ಆಗುವುದಿಲ್ಲ,ಬದಲಿಗೆ ಅದು ಮತ್ತಷ್ಟು ಹೆಚ್ಚಾಗುತ್ತದೆ! ಗೊತ್ತೇ ನಿನಗೆ,ಹೆತ್ತವರ ಕಣ್ಣೀರು ಎಲ್ಲದಕ್ಕಿಂತಲೂ ಅತೀ ಹೆಚ್ಚು ಬೆಲೆ ಉಳ್ಳದ್ದು ವಸು.. 


- ಪುರು..... 


- ಏನು..? 


- ಹೇಳು..... ಏತಕ್ಕಾಗಿ ನೀನು ಇಷ್ಟೊಂದು ಒಳ್ಳೆಯವನು?! 


- ನಿಜ ಹೇಳಬೇಕೆಂದರೆ ಪ್ರೀತಿಸಿದವರೆಲ್ಲರೂ ಒಂದಾಗಲೇ ಬೇಕು ಎಂದು ಎಲ್ಲಿಯೂ ಇಲ್ಲ ವಸು.ನಮ್ಮೆಲ್ಲಾ ಅಮರ ಪ್ರೇಮಿಗಳ ಕಥೆಗಳನ್ನೇ ನೋಡು,ಅವುಗಳಲ್ಲಿ ಪ್ರೇಮಿಗಳು ಒಂದಾಗಿದ್ದೇ ಬಹಳ ಅಂದರೆ ಬಹಳನೇ ಅಪರೂಪ.. 


- ಹಾಗಾದರೆ ಯಾವ ಸುಖಕ್ಕಾಗಿ ಈ ಪ್ರೀತಿ ಮಾಡಬೇಕು? 


- ಗೊತ್ತಿಲ್ಲ! 


- ಮತ್ತೆ ನಿನಗೆ ಗೊತ್ತಿರುವುದಾದರು ಏನು ಪುರು? 


- ಸಾಯುವುದು ತಪ್ಪು.. ಅದು ಮಾತ್ರ ಗೊತ್ತಿದೆ. 


- ಮುಂದೆ ಜೀವನ ಪೂರ್ತಿ ಪ್ರತಿ ದಿನವೂ,ಪ್ರತಿ ಕ್ಷಣವೂ ಇಷ್ಟಿಷ್ಟೇ ಸಾಯುವುದಕ್ಕಿಂತ ಒಮ್ಮೆಲೇ ಸತ್ತು ಬಿಡುವುದೇ ಕ್ಷೇಮವಲ್ಲವೇ..?! 


- ಹ್ಞೂಂ... 


- ಇಂದೇ ಸತ್ತು ಹೋಗುತ್ತಿದ್ದೆನಲ್ಲವೇ ಪುರು.! ಆ ರೈಲು ನನಗಾಗಿ,ನಾನು ರೈಲಿಗಾಗಿ,ರೈಲಿನ ಹಳಿ ನಮ್ಮಿಬ್ಬರಿಗಾಗಿಯೇ ಕಾದು ಕುಳಿತಿತ್ತು!! ಹೇಳು..ಏತಕ್ಕಾಗಿ ?ಯಾವ ಸುಖಕ್ಕಾಗಿ ಈ ನಡುರಾತ್ರಿ ಎಲ್ಲೆಲ್ಲೋ ನನ್ನನ್ನು ಹುಡುಕಾಡಿ ಕೊನೆಗೆ ಅಲ್ಲಿಗೂ ಬಂದು ನನ್ನ ಮನಸ್ಸು ಬದಲಾಯಿಸಿ ಸಾಯುವುದರಿಂದ ಪಾರು ಮಾಡಿಬಿಟ್ಟೆ ನನ್ನನ್ನು ?! 


                " Keeiyeeiin..keeiyeeiin....Vrooooom "


- ನಿಜ ಹೇಳಬೇಕೆಂದರೆ ಇದು ನೀನು ನನ್ನನ್ನು ಕಾಪಾಡಿದಲ್ಲ  ಪುರು,ಮತ್ತೆ ನನಗಿಷ್ಟಲ್ಲದ ನರಕಕ್ಕೆನೇ ನೀನು ತಳ್ಳಿದ್ದು!! 


- ವಸು ಎಲ್ಲವೂ ನಮ್ಮ ಇಷ್ಟದಂತೆಯೇ ನಡೆದು ಬಿಟ್ಟರೆ ಬಹುಶಃ ಈ ಬದುಕಿನಲ್ಲಿ ಆ ಭಗವಂತನ ನೆನಪು ಕೂಡ ಯಾರಿಗೂ ಆಗುತ್ತಿರಲಿಲ್ಲವೋ ಏನೋ.. ಅಲ್ಲವೇ? 


- ಪುರು ನೀನು ಬರೀ ಪಾಪಿಯಲ್ಲ.. ನೀನು ಪರಮ ಪಾಪಿ!! 


- ಹ್ಞೂಂ... 


- ನಾಳೆ ಮದುವೆಗೆ ಬರುತ್ತೀಯಾ? 


- ನಿನ್ನ ಮದುವೆಗೆ ಅಲ್ಲವೇ ವಸು,ನಾನು ಹೇಗೆ ಬರದಿರಲು ಸಾಧ್ಯ ವಸು?! 


- ಸತ್ಯ ಹೇಳು ಪುರು..ನಿಜವಾಗಿಯೂ ನಿನಗೆ ಮನಸ್ಸೆಂಬುದೇ ಇಲ್ಲವೇ? 


- ಏಕೆ? 


- ನಾನು ಬೇರೆಯವನೊಂದಿಗೆ ಮದುವೆ ಆಗುವುದನ್ನು ನೋಡಿಯೂ ಕೂಡ ಏನೂ ಆಗದಂತೆ ನೀನು ನನ್ನೆದುರಿಗೆ ಇರಬಲ್ಲೆಯಾ? ಇದು ಸಹಿಸಿಕೊಳ್ಳಬಲ್ಲೆಯಾ?! 


- ಬದುಕು ಎಲ್ಲವನ್ನೂ ಕಲಿಸುತ್ತದೆ ವಸು.ಕೆಲವೊಂದನ್ನು ಇಷ್ಟವಿಲ್ಲದಿದ್ದರೂ ಸಹಿಸಿಕೊಳ್ಳಬೇಕು! ಬದುಕು ಕಲಿಸಿದ್ದನ್ನೇ  ಕಲಿಯಬೇಕು. 


- ಹ್ಞೂಂ..


- ವಸು..ನಮ್ಮ ಪ್ರೀತಿ ಗೆಲ್ಲದಿರಬಹುದು,ಆದರೆ ನೆನಪುಗಳು..ಇಲ್ಲ ಅದು ಸಾಯುವುದಿಲ್ಲ,ಮಸುಕಂತು ಆಗುವುದೇ ಇಲ್ಲ.ನಾನು ನಮ್ಮಿಬ್ಬರ ಆ ಅಮರ ನೆನಪುಗಳಲ್ಲಿಯೇ ಸದಾ ಸುಖವಾಗಿರುತ್ತೇನೆ ವಸು. 


- ಹತ್ತಿರವೇ ಇಲ್ಲದ ಮೇಲೆ ಈ ನೆನಪುಗಳಲ್ಲಿ ಅದೆಂತಹ ಸುಖ ಇರಲು ಸಾಧ್ಯ ಪುರು? ಅದು ಕೇವಲ ಸುಡುತ್ತದೆ ಅಷ್ಟೇ!! ಹೌದು..ತೀಕ್ಷ್ಣವಾಗಿ!! 


             " ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

               ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ, 

               ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ

               ಮನಸು ಕಂಡ ಆಸೆಯೆಲ್ಲ,ಕನಸಿನಂತೆ ಕರಗಿತಲ್ಲ

               ಉಲ್ಲಾಸ ಇನ್ನೆಲ್ಲಿದೆ...? 


               ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ..!!" 


- ಆ ಹಾಡು ಬದಲಾಯಿಸು ವಸು! 


- ಏಕೆ...? ನಿನಗೂ ಚುಚ್ಚುತ್ತಿದೆಯೇ! ನೋವು.. ನಿನಗೆ ನೋವು.. ಹಹ್ಹಾ... ಹಹ್ಹಾ... ನನಗಂತು ನೀನು ಮನುಷ್ಯ ಎಂದು ಎಂದಿಗೂ ಅನಿಸಿಯೇ ಇಲ್ಲ ಪುರು,ಇನ್ನು ನಿನಗೆಲ್ಲಿಯೇ ನೋವು ಹೇಳು.. ಹಹ್ಹಾ.... ಹಹ್ಹಾ....! ಅದೆಲ್ಲಾ ಕೇವಲ ನಮ್ಮಂತಹ ಮನುಷ್ಯರಿಗೆ,ಈ ಮನಸ್ಸು,ಹೃದಯ ಇರುವವರಿಗಷ್ಟೇ ಆಗಲು ಸಾಧ್ಯ.ಹ್ಞೂಂ..ನೀನು ಮನುಷ್ಯನಲ್ಲ ಅನ್ನುವುದರಲ್ಲಿ ನನಗಂತು ಯಾವುದೇ ಸಂಶಯವಿಲ್ಲ.ಒಂದು ರೀತಿಯಲ್ಲಿ ದೇವರೇ ಆದರೂ, ನೀನು...ನೀನು ನನ್ನ ಬದುಕಿಗೇಕೇ ದೇವರು ಆಗಲಿಲ್ಲ ಪುರು?!! ಹೇಳು.. ನನಗೇಕೆ ನೀನು ದೇವರಾಗಲಿಲ್ಲ! ನಿಜ ಹೇಳಬೇಕೆಂದರೆ ನೀನು ಆ ಕಾಣದ ದೇವರಿಗಿಂತಲೂ ತುಂಬಾನೇ  ಕ್ರೂರಿ! ಏಕೆಂದರೆ ನಿನ್ನಲ್ಲಿ ನನಗೆಂದು ಸ್ವಲ್ಪವೂ ಕರುಣೆಯೇ ಇಲ್ಲ..!! 


         

       " Keeiyeeiin..keeiyeeiin.. keeiyeeiiiin... "


- ಪುರು... 


- ಹೇಳು ವಸು? 


- ನಾಳೆ ನೀನು ಮದುವೆ ಮನೆಗೆ ಬರಬೇಡ ! 


- ಏಕೆ? 


-ನಿನಗಾದರೂ ಕಲ್ಲು ಹೃದಯವಿದೆ.ಆದರೆ... ಆದರೆ...ನಾನು ನಿನ್ನಂತೆ ಅಲ್ಲ ನೋಡು.ಅಸಹಾಯಕಳು ನಾನು! ನಿನ್ನನ್ನು ನೋಡಿದ ಕೂಡಲೇ ಮತ್ತೆ ಸೋತು ಬಿಡುತ್ತೇನೆ ಪುರು! ನಿಜವಾಗಿಯೂ ಇನ್ನಷ್ಟು ಸೋತು ಬಿಡುತ್ತೇನೆ,ಕೈ ಮುಗಿದು ಕೇಳಿಕೊಳ್ಳುತ್ತೇನೆ..ದಮ್ಮಯ್ಯ.. ಬರಬೇಡ ನೀನು..! 


- ಆಯಿತು ಬಿಡು ವಸು... ನೀನು ಹೇಳಿದ ಮೇಲೆ ನಾನು ಬರುವುದಿಲ್ಲ !! 


               “SCREEEEEEEEEEEEEEECHHHH!!.... ” 


-  ಕಾರು ಏಕೆ ನಿಲ್ಲಿಸಿದೆ ಪುರು?! 


- ನಿನ್ನ ಮನೆ ಬಂತು !! 


- ಹ್ಞೂಂ... 


- ಹ್ಞೂಂ...! 


- ಇಳಿಯಲೇಬೇಕೇ? 


- ಡೋರ್ ಲಾಕ್ ಒಪನ್ ಆಯಿತು ನೋಡು !! 


" clunk..." 


- ಹ್ಞೂಂ.. 


"Thuuuduuud...!!! "


- ಡೋರ್ ಕೂಡ ಹಾಕಿದ್ದೇನೆ ಪುರು.ಹೋಗಬಹುದು ನೀನಿನ್ನು.!! 


- ಹ್ಞೂಂ..!! 


- ಪುರು..


- ಹೇಳು ವಸು..? 


- ನಾನೀಗ ನಿನಗೆ ಏನು ಹೇಳಬೇಕು.ಬರಲೇ ಎಂದು ಹೇಳಲೇ.. ಅಥವಾ ಹೋಗುವೆ ಪುರು.. ಎಂದು ಹೇಳಲೇ?! 


- ನನಗದು ಗೊತ್ತಿಲ್ಲ ವಸು!!


-  ಹೋಗುತ್ತೇನೆ ಪುರು! ಯಾವತ್ತಿಗೂ ಸುಖವಾಗಿಯೇ ಇರು..ಆದರೆ ನನ್ನ ಕಣ್ಣಿಗೆ ಮಾತ್ರ ಯಾವತ್ತಿಗೂ ಬೀಳಬೇಡ ನೀನು,ಆಮೇಲೆ ನನ್ನ ಬದುಕು ಇನ್ನೂ ಕಷ್ಟವಾಗಬಹುದು!!! 


- ಹ್ಞೂಂ...! 


- ಬಾಯ್....! 


- ಗುಡ್ ಬಾಯ್ ಪುನರ್ವಸು...!!! 


"CluckCluck..Cluck..Vroom..vroom..vroooooom.." 


.....................................................................................


#ಪುಷ್ಯರಾಗ 


Ab Pacchu 

Moodubidire 

(photo-internet)

https://phalgunikadeyavanu.blogspot.com/

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..